ಬಿ.ಎಸ್.ಯಡಿಯೂರಪ್ಪ ಅವರು ತಮಗೆ ಮುಖ್ಯಮಂತ್ರಿ ನೀಡಲು ಮುಂದಾದ ಸಂಪುಟ ದರ್ಜೆ ಸ್ಥಾನಮಾನ
ವನ್ನು ನಿರಾಕರಿಸಿರುವುದು (ಪ್ರ.ವಾ., ಆ. 9) ಅವರ ಸುದೀರ್ಘ ಐದು ದಶಕಗಳ ನುರಿತ ರಾಜಕೀಯ ವ್ಯಕ್ತಿತ್ವದ
ಒಂದು ಮಾದರಿ ನಡೆಯೇ ಆಗಿದೆ.
ಇದು ಕೇವಲ ಅವರ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗದೆ, ನೂತನ ಮುಖ್ಯಮಂತ್ರಿ ವಿರುದ್ಧ ಏಳಬಹುದಾದ ಅನುಚಿತ ಟೀಕೆಗಳನ್ನು ಹಾಗೂ ಭವಿಷ್ಯದ ರಾಜಕಾರಣದಲ್ಲಿ ಒಂದು ಅನುಚಿತ ಸಂಪ್ರದಾಯಕ್ಕೆ ನಾಂದಿ ಆಗಬಹುದಾದ ಬೆಳವಣಿಗೆಯನ್ನು ತಪ್ಪಿಸಿದೆ. ಇಷ್ಟಲ್ಲದೆ ಇದೊಂದು ಸಕಾಲಿಕವಾದ ಸನ್ನಡತೆಯೂ ಆಗಿದೆ.
ಪ್ರಸಕ್ತ ಕಾಲಮಾನದ ರಾಜಕಾರಣದಲ್ಲಿ ಕೇವಲ ಅಧಿಕಾರ ಗಳಿಕೆ, ಹಣ ಗಳಿಕೆಯೇ ವ್ಯಕ್ತಿಗತ ರಾಜಕಾರಣದ ಗುರಿ ಆಗಿರುವುದನ್ನು ಎಲ್ಲ ಹಂತಗಳಲ್ಲೂ ಕಾಣುತ್ತಿದ್ದೇವೆ. ನಮ್ಮ ಜನನಾಯಕರಲ್ಲಿ ಸಾಮಾಜಿಕ ಏಳಿಗೆಗೆ ಅಗತ್ಯವಾಗಿ ಇರಬೇಕಾದ ಸೇವಾ ಮನೋಭಾವ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಪ್ರಸಕ್ತ ನಿಲುವು ಆದರ್ಶಪ್ರಾಯವೂ ಆಗಿದೆ.
ಗಿ.ಚನ್ನಬಸವ ಸ್ವಾಮಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.