ADVERTISEMENT

ಹಣ ವರ್ಗಾವಣೆ ಲೋಪ: ತಪ್ಪಿತಸ್ಥರನ್ನು ಶಿಕ್ಷಿಸಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:00 IST
Last Updated 5 ಜೂನ್ 2020, 20:00 IST

ಹಾವೇರಿ ಜಿಲ್ಲೆಯಲ್ಲಿ ರೈತರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದೆ ಕೇವಲ ಏರ್‌ಟೆಲ್‌ ಮೊಬೈಲ್‌ ಸಂಖ್ಯೆ ಜೋಡಣೆ ಮಾಡಿರುವುದರಿಂದ, ಸರ್ಕಾರದ ಪರಿಹಾರದ ಹಣ ಏರ್‌ಟೆಲ್‌ ಖಾತೆಗಳಿಗೆ ಜಮೆ ಆಗಿರುವ ಪ್ರಮಾದ ನಡೆದಿರುವುದನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ವಿವರಿಸಿದ್ದಾರೆ (ಪ್ರ.ವಾ., ಜೂನ್ 5).

ಈ ಸಂಕಷ್ಟದ ಕಾಲದಲ್ಲಿ ರೈತರ ಕೈಗೆ ಬಂದ ತುತ್ತು ತಕ್ಷಣ ಬಾಯಿಗೆ ಬರದಂತೆ ಮಾಡಿರುವ ಲೋಪವು, ಹಾವೇರಿಯಲ್ಲಿ ನಮ್ಮ ಆಡಳಿತಾಂಗದ ನೇತೃತ್ವ ವಹಿಸಿರುವ ಅಧಿಕಾರಶಾಹಿಯ ಅಸೂಕ್ಷ್ಮತೆ ಮತ್ತು ದುಡಿಯುವ ಜನರ ಕುರಿತು ಅದು ಬೆಳೆಸಿಕೊಂಡಿರುವ ಅನಾದರಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಇದು ಬರೀ ತಾಂತ್ರಿಕ ಅಚಾತುರ್ಯವೋ ಅಥವಾ ಅನೈತಿಕ ಕೊಂಡಿಗಳೇನಾದರೂ ಬೆಸೆದಿವೆಯೋ? ಆಗಿರುವ ಎಡವಟ್ಟನ್ನು ಕೂಡಲೇ ಸರಿಪಡಿಸಬೇಕು. ಈ ಕುರಿತು ತನಿಖೆಯನ್ನೂ ನಡೆಸಬೇಕು.

ಉದ್ಯೋಗ ಖಾತರಿಯ ವೇತನ ಪಾವತಿಯೂ ಒಳಗೊಂಡಂತೆ ಸರ್ಕಾರದ ವಿವಿಧ ಯೋಜನೆಗಳ ‘ನೇರ ನಗದು ವರ್ಗಾವಣೆ’ಯಲ್ಲೂ ಈ ರೀತಿಯ ಲೋಪಗಳು ಹಲವಾರು ಭಾಗಗಳಲ್ಲಿ ಜರುಗುತ್ತಲೇ ಇವೆ. ಫಲಾನುಭವಿಗಳು ತಮ್ಮ ಬ್ಯಾಂಕಿನ ಅಕೌಂಟ್ ನಂಬರ್‌ ಒದಗಿಸಿದ್ದಾಗ್ಯೂ ಕೆಲವೊಮ್ಮೆ ಇಂತಹ ಪ್ರಮಾದಗಳು ನಡೆಯುತ್ತಿರುವುದು ಯಾವ ಕೋನದಿಂದ ನೋಡಿದರೂ ಆಕಸ್ಮಿಕ ಎನಿಸುವುದಿಲ್ಲ.

ADVERTISEMENT

–ಅಯ್ಯಪ್ಪ ಹೂಗಾರ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.