ಮಠ, ದೇಗುಲಗಳಿಗೆ ಕೆಲ ವರ್ಷಗಳ ಹಿಂದೆ ಶುರುವಿಟ್ಟ ಅನುದಾನ ನೀಡುವ ಪದ್ಧತಿ, ರಾಜ್ಯದ ಈಗಿನ ವಿಷಮ ಪರಿಸ್ಥಿತಿಯಲ್ಲಿಯೂ ಮುಂದು ವರಿಯುತ್ತಿರುವುದು (ಪ್ರ.ವಾ., ಮಾರ್ಚ್ 18) ಮೆಚ್ಚುಗೆಯ ನಡೆಯಲ್ಲ. ಯಾವ ಮಠ, ಮಂದಿರವೂ ಇಂದು ಬಡವಾಗಿಲ್ಲ. ಸಮುದಾಯ, ಸಾರ್ವಜನಿಕರ ದೇಣಿಗೆಗಳಿಂದ, ಭಕ್ತರ ಕೊಡುಗೆಗಳಿಂದ ಅವು ಸುಸ್ಥಿತಿ ಯಲ್ಲಿವೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಠ, ಮಂದಿರಗಳು ಎಂದೂ ಹಣದ ಅಡಚಣೆಯನ್ನು ಎದುರಿಸಿದಂತಹ ಉದಾಹರಣೆ ಇಲ್ಲ. ದೇಗುಲಗಳ ಪುನರುಜ್ಜೀವನ ಕಾರ್ಯವು ಹಣದ ತೊಂದರೆಯಿಲ್ಲದೆ ಎಲ್ಲೆಡೆ ಸಾಂಗವಾಗಿ ಸಾಗುತ್ತಿದೆ.
ಈಗ ರಾಜ್ಯದ ಉದ್ದಗಲಕ್ಕೂ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳಿವೆ. ಹೀಗಿರುವಾಗ, ತೆರಿಗೆಯ ಹಣವನ್ನು ಅನುತ್ಪಾದಕ ಕ್ಷೇತ್ರಗಳಿಗೆ ಹರಿಸುವುದು ವಿವೇಚನೆಯ ನಿರ್ಧಾರವಾಗುವುದಿಲ್ಲ. ಯಾವುದೇ ಅನುದಾನವು ಸಾರ್ವಜನಿಕ ಬದುಕನ್ನು ಹಸನಾಗಿಸುವ ದೃಷ್ಟಿಯನ್ನು ಹೊಂದಿರಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪೋಲಾಗುವ ಹಣಕ್ಕೂ ಕಡಿವಾಣ ಹಾಕಬೇಕು.
ಧರ್ಮಾನಂದ ಶಿರ್ವ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.