ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಸುವ ಯೋಜನೆಗೆವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಸೂಚಿಸಿದ್ದಾರೆ (ಪ್ರ.ವಾ., ಜೂನ್ 21). ಇದೊಂದು ಅವೈಜ್ಞಾನಿಕ ಯೋಜನೆ. ‘ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ಕಾರ್ಯನಿರ್ವಹಿಸಿ’ ಎಂಬ ಮಾತಿದೆ. ಭೂಮಿ ಇಂದು ಎದುರಿಸುತ್ತಿರುವ ಸಮಸ್ಯೆಗಳು ಜಾಗತಿಕವಾದವು. ಅದರಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಒಂದು. ಈ ಸಮಸ್ಯೆಗೆ ಕಾರಣಗಳನ್ನು ನಾವು ಜಾಗತಿಕವಾಗಿ ಚಿಂತಿಸಬೇಕಿದೆ. ಏಕೆಂದರೆ, ಈ ಸಮಸ್ಯೆ ಸರ್ವವ್ಯಾಪಿಯೂ, ಜೀವಸಂಕುಲ ನಾಶಕವಾಗಿಯೂ ಪರಿಣಮಿಸುತ್ತಿದೆ.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಕಾರಣಗಳ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ಇದಕ್ಕೆ, 450 ಕಿ.ಮೀ. ದೂರದಿಂದ ಪೈಪ್ನಲ್ಲಿ ನೀರು ತರುವುದು ಶಾಶ್ವತ ಪರಿಹಾರವಲ್ಲ. ಒಂದು ವೇಳೆ ಮೂರ್ನಾಲ್ಕು ವರ್ಷ ಮುಂಗಾರು ಕೈಕೊಟ್ಟು ಜಲಾಶಯ ಭರ್ತಿಯಾಗದಿದ್ದರೆ ಏನು ಮಾಡುವುದು? ಎಲ್ಲಿಂದ ನೀರನ್ನು ತರುವುದು? ಆದ್ದರಿಂದಲೇ ಸಮಸ್ಯೆಗೆ ಸ್ಥಳೀಯವಾಗಿ ಕಾರ್ಯನಿರ್ವಹಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಬೆಂಗಳೂರಿನ ಕೆರೆಗಳ ರಕ್ಷಣೆ, ಮೇಲ್ಚಾವಣಿಯ ನೀರನ್ನು ಸಂಗ್ರಹಿಸಿ ಬಳಸುವುದು, ಅಂತರ್ಜಲ ಮರುಪೂರಣ, ನದಿ ಮೂಲಗಳ ರಕ್ಷಣೆ, ನೀರಿನ ಮಿತಬಳಕೆ, ನಗರಗಳಿಗೆ ವಲಸೆ ತಡೆಯುವುದು ಇವೇ ಮುಂತಾದವು ಸ್ಥಳೀಯ ಪರಿಹಾರ ಆಗಬಲ್ಲವು. ಸರ್ಕಾರ ಮತ್ತು ನಾಗರಿಕರು ಈ ಬಗ್ಗೆ ಗಮನಹರಿಸಬೇಕು.
- ಕಿಶೋರ್ ಜಿ.,ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.