ADVERTISEMENT

ಕ್ಷೇತ್ರ ಬಿಟ್ಟುಕೊಡುವುದೆಂದರೆ...

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 21:09 IST
Last Updated 7 ಡಿಸೆಂಬರ್ 2021, 21:09 IST

‘ಸ್ವಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲಂದ್ರ ಇಲ್ಲಿ ಯಾಕ ನಿಲ್ಲಬೇಕು? ನಮಗೆ ಯಾಕ ಗಂಟ ಬಿದ್ರಿ ನೀವು’ ಎಂದು ‘ಈ ಬಾರಿಯ ಚುನಾವಣೆಯಲ್ಲೂ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ’ ಎಂದ ಸಿದ್ದರಾಮಯ್ಯನವರಿಗೆ, ಕಳೆದ ಬಾರಿಯ ಚುನಾವಣೆಯಲ್ಲಿ ಅವರಿಗಾಗಿ ಆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪ್ರಶ್ನಿಸಿದ್ದಾರೆ. ಅವರ ಈ ಆಕ್ರೋಶ ಸರಿಯಾಗಿಯೇ ಇದೆ. ಕ್ಷೇತ್ರ ಬಿಟ್ಟುಕೊಡುವುದೆಂದರೆ ಸುಲಭದ ಸಂಗತಿಯಲ್ಲ. ಯಾವುದೋ ಕಾರಣಕ್ಕೆ ಹೀಗೆ ಬಿಟ್ಟುಕೊಡುವವರು ನಂತರದ ವರ್ಷಗಳಲ್ಲಿ ಜನಮಾನಸದಿಂದ ಮರೆಯಾಗುವ ಸಾಧ್ಯತೆ ಹೆಚ್ಚು. ಇದೇ ಚಿಮ್ಮನಕಟ್ಟಿ ಅವರ ಮನದ ನೋವಿಗೆ ಕಾರಣ. ಚಿಮ್ಮನಕಟ್ಟಿ ಅವರ ನೇರವಂತಿಕೆಗೆ ಮತ್ತು ಧೈರ್ಯಕ್ಕೆ ಮೆಚ್ಚುಗೆ ಸೂಚಿಸಬೇಕು.

ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ, ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ, ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ, ದೇವೇಗೌಡರು ತುಮಕೂರಿನಲ್ಲಿ, ಎಸ್.ಎಂ.ಕೃಷ್ಣ ಚಾಮರಾಜಪೇಟೆಯಲ್ಲಿ, ಅನಂತನಾಗ್ ಬಸವನಗುಡಿಯಲ್ಲಿ ಸ್ಪರ್ಧಿಸಿದ್ದು ಗಮನಾರ್ಹ. ಈ ಪಟ್ಟಿ ಬಹಳಷ್ಟು ದೊಡ್ಡದಿದೆ. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯಾದರೂ ಸೋಲಿನ ಭೀತಿಯೇ ಅತಿಮುಖ್ಯ ಕಾರಣ. ಇಂತಹದ್ದರ ಜೊತೆಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ದಿಸುವವರೂ ಇದ್ದಾರೆ.

ನರೇಂದ್ರ ಮೋದಿ, ರಾಹುಲ್ ಗಾಂಧಿ ಮುಂತಾದವರು ಇದಕ್ಕೆ ನಿದರ್ಶನ. ಇಂತಹ ಬೆಳವಣಿಗೆಗೆ ಚುನಾವಣಾ ಆಯೋಗ ತಡೆಹಾಕಿದರೆ ನಿಸ್ಪೃಹ ಜನಸೇವಕರಿಗೆ ಅವಕಾಶ ತಪ್ಪದು. ಜೊತೆಗೆ ಉಪಚುನಾವಣೆಯಂತಹ ಅನಗತ್ಯ ಖರ್ಚುಗಳಿಗೂ ಕಡಿವಾಣ ಬೀಳುತ್ತದೆ. ಸದರಿ ಕ್ಷೇತ್ರದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ವಾಸವಿದ್ದವರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಲಿ.

ADVERTISEMENT

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.