ಇತರೆ ಹಿಂದುಳಿದ ವರ್ಗದ (ಒಬಿಸಿ) ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣದ ಮೀಸಲಾತಿ ಸೌಲಭ್ಯ ಪಡೆಯಲು, ಒಬಿಸಿ ಪ್ರಮಾಣಪತ್ರಕ್ಕಾಗಿ ನೆಮ್ಮದಿ ಅಥವಾ ಅಟಲ್ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿದರೆ, ಅವರಿಗೆ ‘ಭಾರತ ಸರ್ಕಾರದ ಹುದ್ದೆಗೆ ಆಯ್ಕೆಗೊಳ್ಳಲು ಇತರೆ ಹಿಂದುಳಿದ ವರ್ಗದವರು ಸಲ್ಲಿಸಬೇಕಾದ ಪ್ರಮಾಣಪತ್ರದ ನಮೂನೆ’ ಎಂಬ ತಲೆಬರಹದ ಅಡಿ ಪ್ರಮಾಣಪತ್ರ ದೊರೆಯುತ್ತದೆ!
ಉದ್ಯೋಗದ ಬದಲು ಶಿಕ್ಷಣಕ್ಕಾಗಿ ಒಬಿಸಿ ಪ್ರಮಾಣಪತ್ರ ಕೊಡಿ ಎಂದು ತಹಶೀಲ್ದಾರರನ್ನು ಕೋರಿದರೆ, ನಿಗದಿತ ನಮೂನೆ ಬಿಟ್ಟು, ಶಿಕ್ಷಣಕ್ಕಾಗಿ ಒಬಿಸಿ ಪ್ರಮಾಣಪತ್ರ ನೀಡಲು ನಮಗೆ ಆದೇಶ ಇಲ್ಲ ಎನ್ನುತ್ತಿ
ದ್ದಾರೆ. ಹೋಗಲಿ, ಮೀಸಲಾತಿಗಾಗಿ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ದಿಷ್ಟಪಡಿಸಿದ ನಮೂನೆಯಲ್ಲಾ
ದರೂ ಒಬಿಸಿ ಪ್ರಮಾಣಪತ್ರ ಕೊಡಿ ಎಂದು ಕೋರಿದರೂ ಪ್ರಚಲಿತ ನಮೂನೆ ಬಿಟ್ಟು, ಬೇರೆ ಯಾವುದೇ ಹೊಸ ನಮೂನೆಯಲ್ಲಿ ಒಬಿಸಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗುತ್ತಿದೆ. ಇದ ರಿಂದ, ರಾಜ್ಯದ ಹೊರಗೆ, ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿಯು ಕರ್ನಾಟಕದ ಒಬಿಸಿ ವಿದ್ಯಾರ್ಥಿಗಳಿಗೆ ಎದುರಾಗಿದೆ. ಈ ನ್ಯೂನತೆಯನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು.
ಲೋಕೇಶ ಎಲ್. ಗೌಡ, ಗೋಕರ್ಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.