ಆದಿಚುಂಚನಗಿರಿ ಶ್ರೀಗಳು, ರಾಜಕೀಯ ಪ್ರಮುಖರು ಹಾಗೂ ಚಿತ್ರನಟರ ಫೋನ್ಗಳನ್ನು ರಕ್ತಚಂದನ ಕಳ್ಳ
ಸಾಗಣೆದಾರರ ಪಟ್ಟಿಯಲ್ಲಿ ಸೇರಿಸಿ ಕದ್ದಾಲಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಿಂದಿನ ಸರ್ಕಾರವು ಶ್ರೀಗಳ ಫೋನ್ ಕದ್ದಾಲಿಸಿರುವುದಕ್ಕೆ ತಾವು ಕ್ಷಮೆ ಯಾಚಿಸುವುದಾಗಿ ಸಚಿವ ಅಶೋಕ ಅವರೂ, ತಾವು ಕದ್ದಾಲಿಸಿಲ್ಲವೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಹೇಳಿದ್ದಾರೆ.
ಹಿಂದಿನ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಅಪಾಯದ ಅಂಚಿನಲ್ಲಿ ಇದ್ದ ಸಂದರ್ಭವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಸರ್ಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯದಿಂದ ಕದ್ದಾಲಿಕೆ ನಡೆದಿರಬಹುದೆಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡುವುದರಲ್ಲಿ ಆಶ್ಚರ್ಯವಿಲ್ಲ. ನೂರಾರುಜನರ ಫೋನ್ಗಳು ಕದ್ದಾಲಿಕೆಯಾಗಿದ್ದವು ಎಂಬುದನ್ನು ಗಮನಿಸಿದಾಗ, ಸಹಜವಾಗಿಯೇ ಮೂಡುವ ಪ್ರಶ್ನೆಯೆಂದರೆ, ಫೋನ್ ಕದ್ದಾಲಿಕೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರ, ಆ ಪಟ್ಟಿಗೆ ಅನಧಿಕೃತವಾಗಿ ಇತರರ ಹೆಸರುಗಳನ್ನೂ ಸೇರಿಸಲಾಗುತ್ತಿತ್ತೇ ಎಂಬುದು. ಅಲ್ಲದೆ, ಮುಖ್ಯಮಂತ್ರಿಯವರ ನೇರ ಅಧೀನದಲ್ಲಿರುವ ಗುಪ್ತಚರ ವಿಭಾಗದ ಗಮನಕ್ಕೇ ಇಂತಹ ಅತಿ ಸೂಕ್ಷ್ಮ ವಿಚಾರ ಬಾರದಿರುವುದು. ಹಾಗಾಗಿದ್ದರೆ, ಇದು ಆ ವಿಭಾಗದ ಅದಕ್ಷತೆ, ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯವಾಗುವುದಿಲ್ಲವೇ? ಉದ್ದೇಶಪೂರ್ವಕವಾಗಿಯೇ ಅದುಕಂಡೂ ಕಾಣದಂತೆ ಇದ್ದುಬಿಟ್ಟಿತೇ? ಇವಕ್ಕೆಲ್ಲಾ ಸಿಬಿಐನ ನಿಷ್ಪಕ್ಷಪಾತ ತನಿಖೆಯೊಂದೇ ಉತ್ತರ ನೀಡಬಹುದೇನೊ!
–ಪುಟ್ಟೇಗೌಡ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.