ADVERTISEMENT

ವಾಚಕರ ವಾಣಿ: ಸರ್ಕಾರಿ ಖಜಾನೆ ತುಂಬಿಸುವ ಇರಾದೆ?

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:30 IST
Last Updated 8 ಜನವರಿ 2023, 19:30 IST

ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯದೇ ನಿವೇಶನಗಳಿಗೆ ಇ-ಸ್ವತ್ತು ಮಾಡಿಕೊಟ್ಟಿರುವ ಆರೋಪದ ಮೇಲೆ ಪೌರಾಯುಕ್ತ, ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿರುವ ಸುದ್ದಿ (ಪ್ರ.ವಾ., ಜ. 8) ಓದಿ ಸರ್ಕಾರದ ದ್ವಂದ್ವ ನೀತಿಯ ಬಗ್ಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ನಗರಸಭೆಗಳು ನಿವೇಶನಗಳನ್ನು ಖರೀದಿಸಿದ ಮಾಲೀಕರಿಗೆ ಖಾತಾ ನೀಡುವುದೇ ಸಂಬಂಧಿತ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆದಿರುವ ಬಡಾವಣೆಗಳಲ್ಲಿನ ನಿವೇಶನಗಳಿಗೆ ಮಾತ್ರ ಎಂದಾದರೆ, ಅಂತಹ ಅನುಮತಿರಹಿತ ಬಡಾವಣೆಗಳಲ್ಲಿನ ನಿವೇಶನಗಳನ್ನು ಬಡಾವಣೆ ನಿರ್ಮಾಪಕರು ಹೇಗೆ ಮಾರುತ್ತಿದ್ದಾರೆ ಮತ್ತು ಸರ್ಕಾರದ್ದೇ ಆದ ಉಪನೋಂದಣಿ ಕಚೇರಿಗಳಲ್ಲಿ ಹೇಗೆ ಆ ಮಾರಾಟವನ್ನು ನೋಂದಾಯಿಸಲಾಗುತ್ತದೆ?

ಇದು ಕೇವಲ ನೋಂದಣಾ ಶುಲ್ಕ ವಸೂಲಿ ಮೂಲಕ ಸರ್ಕಾರಿ ಖಜಾನೆ ತುಂಬಿಸುವ ಇರಾದೆಯಲ್ಲದೆ ಮತ್ತೇನು? ಸರ್ಕಾರದ್ದೇ ಕಚೇರಿಗಳಿಗೆ ದ್ವಂದ್ವದ ಆದೇಶಗಳೇ? ಉಪನೋಂದಣಿ ಕಚೇರಿಗೆ ವ್ಯವಹಾರ ಸರಿ ಎನಿಸಿದ್ದು ಯೋಜನಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರಿಯಲ್ಲವೇ? ನಿವೇಶನ ಖರೀದಿ ಪತ್ರಗಳಲ್ಲಿ ಯಾವ ಸರ್ವೆ ಸಂಖ್ಯೆಯಲ್ಲಿ ಬಡಾವಣೆ ನಿರ್ಮಿಸಿ ಎಷ್ಟು ನಿವೇಶನಗಳನ್ನು ವಿಂಗಡಿಸಲಾಗಿದೆ, ನಿವೇಶನದ ಸಂಖ್ಯೆ, ಚೆಕ್ಕುಬಂದಿ ವಿವರಗಳಿರುತ್ತವೆಯಲ್ಲವೇ! ಇಷ್ಟಿದ್ದೂ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಪತ್ರ ಮತ್ತಿತರ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ನೋಂದಣಾಧಿಕಾರಿಗಳು ಅಂತಹ ದೋಷಪೂರಿತ ವ್ಯವಹಾರವನ್ನು ಹೇಗೆ ಅನುಮೋದಿಸಿ ನೋಂದಣಿ ಮಾಡುತ್ತಾರೆ? ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಾತ್ರ ಶಿಕ್ಷೆ, ನೋಂದಣಿ ಅಧಿಕಾರಿಗಳು ಮತ್ತು ಅಂತಹ ನಿವೇಶನಗಳನ್ನು ಮಾರಾಟ ಮಾಡಿದ ಬಡಾವಣೆ ನಿರ್ಮಾಪಕರಿಗೆ ಶಿಕ್ಷೆ ಇಲ್ಲವೇ?

-ರಮೇಶ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.