ADVERTISEMENT

ಪೊಲೀಸರ ಸ್ವಂತ ಹಣಕ್ಕೆ ಲೆಕ್ಕವಿರಲಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:26 IST
Last Updated 16 ಆಗಸ್ಟ್ 2019, 19:26 IST

ಸಂಚಾರ‌ ಪೊಲೀಸರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ತಮ್ಮ ಜೇಬಿನಲ್ಲಿರುವ ಹಣದ ಮೊತ್ತವನ್ನು ಠಾಣೆಯಲ್ಲಿ ನಮೂದಿಸಿ‌, ಕರ್ತವ್ಯ ಮುಗಿದ ನಂತರ, ತಾವು ಆ ದಿನ ವಸೂಲಿ ಮಾಡಿದ ದಂಡದ ಮೊತ್ತವಷ್ಟೇ ಹೆಚ್ಚುವರಿಯಾಗಿ ತಮ್ಮ ಬಳಿ ಇರುವುದನ್ನು ಖಾತರಿಪಡಿಸಬೇಕೆಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶಿಸಿರುವುದು ಸ್ವಾಗತಾರ್ಹ.

ಕರ್ತವ್ಯನಿರತ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾರೆಂಬ ಆರೋಪ ಇದೆ. ಹೀಗಾಗಿ, ಸಂಗ್ರಹವಾದ ದಂಡದ ಮೊತ್ತಕ್ಕೂ ಸಂಚಾರ ಪೊಲೀಸರ ಸ್ವಂತ ಹಣಕ್ಕೂ ಹೋಲಿಕೆಯಾಗಬೇಕು ಎಂಬ ಸದುದ್ದೇಶ ಈ ಕ್ರಮದ ಹಿಂದಿದೆ.

ಈ ನಿಯಮ ಹೊಸದೇನೂ ಅಲ್ಲ. ಈಗಾಗಲೇ ಕೆಎಸ್‌ಆರ್‌ಟಿಸಿ ಚಾಲಕರು ಹಾಗೂ ನಿರ್ವಾಹಕರು ಈ ನಿಯಮ ಅನುಸರಿಸುತ್ತಿದ್ದಾರೆ. ಟಿಕೆಟ್‌ನಿಂದ ಸಂಗ್ರಹವಾದ ಮೊತ್ತಕ್ಕಿಂತ ಹೆಚ್ಚು ಹಣ ನಿರ್ವಾಹಕರ ಬಳಿ ಇದ್ದರೆ, ಅವರನ್ನು ಅಮಾನತು ಮಾಡಲಾಗುತ್ತದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ನಿರ್ವಾಹಕರು ಮತ್ತು ಚಾಲಕರು ಸ್ವಂತ ಹಣವನ್ನು ಮಾರ್ಗಪತ್ರದಲ್ಲಿ ನಮೂದಿಸಿ, ಅದಕ್ಕೆ ಅಧಿಕಾರಿಗಳ ಸಹಿ ಹಾಕಿಸಿ ದೃಢೀಕರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಾಗಿದೆ. ಎಲ್ಲ ಪೊಲೀಸರಿಗೂ ಈ ನಿಯಮವನ್ನು ಅನ್ವಯಿಸಿದರೆ ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಬಹುದಾಗಿದೆ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದಾಗ ಪೊಲೀಸರು ತಮ್ಮ ಬಳಿ ಇರುವ ಹಣದ ಮೊತ್ತವನ್ನು ನೋಂದಾಯಿಸಿ ನಂತರ ಕರ್ತವ್ಯ ನಿರ್ವಹಿಸಬೇಕು. ಹೆಚ್ಚುವರಿ ಹಣ ಇರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದರೆ, ಅಂತಹವರನ್ನು ಅಮಾನತು ಮಾಡುವ ಕಠಿಣ ನಿಯಮವನ್ನು ಜಾರಿಗೆ ತರಬೇಕಾಗಿದೆ.

ADVERTISEMENT

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.