ADVERTISEMENT

ವಾಚಕರ ವಾಣಿ| ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಮೈಗೂಡಲಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 19:30 IST
Last Updated 22 ಜನವರಿ 2023, 19:30 IST

ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಸಲ್ಲದು ಎಂಬ ಮುಖ್ಯಮಂತ್ರಿಯವರ ಹಿತನುಡಿ ಹಾಸ್ಯಾಸ್ಪದವಾಗಿದೆ. ರಾಜಕೀಯ ಅನ್ನುವುದು ವಿದ್ಯಾರ್ಥಿ ದೆಸೆಯಿಂದ ಬಂದರಷ್ಟೇ ಸಮಾಜದ ಎಲ್ಲ ಸ್ತರಗಳಿಂದ ಉತ್ತಮ ನಾಯಕರು ರೂಪುಗೊಳ್ಳಲು ಸಾಧ್ಯ. ಇಲ್ಲವಾದಲ್ಲಿ ರಾಜಕೀಯವು ಬಹುತೇಕ ವಂಶಾಡಳಿತಕ್ಕಷ್ಟೇ ಸೀಮಿತವಾಗಲಿದೆ. ಈಗಿರುವವರ ನಂತರ ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರಿಗಷ್ಟೇ ಮೀಸಲಾಗಬಹುದು. ಹಾಗಾದರೆ ಅದು ಜನಸಾಮಾನ್ಯರ ದೌರ್ಭಾಗ್ಯ. ಈಗಿನ ಜನಪ್ರತಿನಿಧಿಗಳಲ್ಲಿ ಕೆಲವರು ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಮೈಗೂಡಿಸಿಕೊಂಡವರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದವರು ನಂತರ ಸಕ್ರಿಯ ಚುನಾವಣಾ ರಾಜಕೀಯಕ್ಕೆ ಬಂದು ದೊಡ್ಡ ನಾಯಕರಾಗಿ ಬೆಳೆದ ನಿದರ್ಶನಗಳು ನಮ್ಮಲ್ಲಿ ಅನೇಕ ಇವೆ.

ಆ ಬಳಿಕ ಕಾಲೇಜುಗಳಲ್ಲಿ ಚುನಾವಣೆಯನ್ನು ನಿಷೇಧಿಸಿದ ಪರಿಣಾಮವಾಗಿ ಉಳ್ಳವರು ಹಾಗೂ ರಾಜಕೀಯ ಹಿನ್ನೆಲೆ ಇದ್ದವರು ರಾಜಕೀಯವನ್ನು ಉದ್ಯಮವನ್ನಾಗಿಸಿಕೊಂಡರು. ವಿಧಾನಸಭಾ ಕ್ಷೇತ್ರಗಳು ಕೆಲವೇ ಕುಟುಂಬಗಳ ಹಿಡಿತಕ್ಕೆ ಒಳಗಾದವು. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ ಜೀವನದ ರಾಜಕೀಯ ಅತ್ಯಗತ್ಯವಾಗಿದೆ. ಕಾಲೇಜುಗಳಲ್ಲಿ ಚುನಾವಣೆಗೆ ಇರುವ ನಿರ್ಬಂಧವನ್ನು ತೆರವುಗೊಳಿಸಬೇಕು. ಭ್ರಷ್ಟಮುಕ್ತ ನಾಡು ಕಟ್ಟಲು ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿ.

- ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.