ಮುಂಗಾರು ಬಿತ್ತನೆಗೆ ಯೂರಿಯಾ ರಸಗೊಬ್ಬರ ಪೂರೈಕೆ ಆಗದ ಕಾರಣ ರೈತ ಸಮುದಾಯ ಕೈಚೆಲ್ಲಿ ಕುಳಿತಿದೆ. ಹೀಗಿದ್ದರೂ ಸದನದಲ್ಲಿ ಆಡಳಿತರೂಢ ಮತ್ತು ಪ್ರತಿಪಕ್ಷದ ಶಾಸಕರು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿಯೇ ಕಾಲಹರಣ ಮಾಡುವುದು ಸರಿಯಲ್ಲ. ರೈತರ ಬಗ್ಗೆ ರಾಜಕೀಯ ಮಾಡುವ ಮುಖಂಡರ ಧೋರಣೆ ಬದಲಾಗಬೇಕಿದೆ. ಅನ್ನದಾತರ ವಿಚಾರದಲ್ಲಿ ಚೆಲ್ಲಾಟ ಆಡುವುದು ಶೋಭೆ ತರುವುದಿಲ್ಲ. ಪಕ್ಷಭೇದ ಮರೆತು ರಸಗೊಬ್ಬರ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಸಕಾಲದಲ್ಲಿ ರಸಗೊಬ್ಬರ, ಬಿತ್ತನೆಬೀಜ ಪೂರೈಸಿ ರೈತರ ಹಿತಕಾಯಬೇಕಿದೆ.
ಮಲ್ಲಿಕಾರ್ಜುನ್ ತೇಲಿ, ಜಮಖಂಡಿ
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದಕ್ಕೆ ರಾಜ್ಯ ಸರ್ಕಾರದ ವಿಶೇಷ ಮುತುವರ್ಜಿ, ಜೊತೆಗೆ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಹಾಗೂ ವಿಶೇಷ ಪ್ರಾಸಿಕ್ಯೂಟರ್ ಪಿ. ಪ್ರಸನ್ನಕುಮಾರ್ ಕಾರಣಕರ್ತರು. ಇಂಥ ತೀರ್ಪಿಗೆ ನ್ಯಾಯಪರರು ಒಂದೆಡೆ ಸಂಭ್ರಮಿಸುವಂತಾದರೆ, ಇನ್ನೊಂದೆಡೆ ಸರ್ಕಾರದ ಭಾಗವೇ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ದರ್ಶನ್ ಜಾಮೀನು ರದ್ದಾದ ವಿಷಯ ಕೇಳಿ ಶಾಕ್ ಆಯಿತು’ (ಪ್ರ.ವಾ., ಆಗಸ್ಟ್ 15) ಎಂದು ಹೇಳಿರುವುದಕ್ಕೆ ಯಾವ ‘ಅರ್ಥ ವಿಶೇಷಣ’ ಕಲ್ಪಿಸಬೇಕು? ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠವು, ಈ ಪ್ರಕರಣದಲ್ಲಿ ಹೈಕೋರ್ಟ್ಗೆ ಛೀಮಾರಿ ಹಾಕಿದ್ದನ್ನು ಉಪ ಮುಖ್ಯಮಂತ್ರಿ ಅವರು ಅಂದೇ ಅರ್ಥೈಸಿಕೊಂಡಿದ್ದರೆ ಈ ರೀತಿ ಉದ್ಘರಿಸುತ್ತಿರಲಿಲ್ಲವೇನೋ.
ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ‘ಸೇವ್ ಡಾಗ್ಸ್’ ಹ್ಯಾಷ್ಟ್ಯಾಗ್ ಬಳಸಿ ಪ್ರಾಣಿಪ್ರಿಯರು ಬೀದಿನಾಯಿಗಳ ರಕ್ಷಣೆಗೆ ಧ್ವನಿ ಎತ್ತುತ್ತಿದ್ದಾರೆ. ಈ ಕಾಳಜಿಯು ಕೇವಲ ಜಾಲತಾಣಗಳಿಗೆ ಸೀಮಿತವಾಗಬಾರದು. ಬೀದಿನಾಯಿಗಳ ಹಾವಳಿಯಿಂದ ವಯಸ್ಕರು, ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೇಬಿಸ್ನಿಂದ ಮೃತಪಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಮ್ಮ ಸುತ್ತಮುತ್ತ ಅನೇಕ ಬೀದಿನಾಯಿಗಳು ನಿರಾಶ್ರಿತವಾಗಿ ಅಲೆದಾಡುತ್ತಿದ್ದು, ಅವುಗಳನ್ನು ದತ್ತು ತೆಗೆದು ಕೊಳ್ಳಬೇಕು. ಅವುಗಳಿಗೆ ಸುರಕ್ಷಿತ ಸೂರು ನೀಡುವುದೇ ನಿಜವಾದ ಪರಿಹಾರ. ಜಾಲತಾಣದಲ್ಲಿ ಕೇವಲ ಪೋಸ್ಟ್ ಹರಿಬಿಟ್ಟರೆ ಸಮಸ್ಯೆ ಬಗೆಹರಿಯುವುದಿಲ್ಲ.
ಅನುಪಮಾ, ಶಿರಿಯಾರ
ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಮೋಜಿನ ಬೆನ್ನು ಹತ್ತಿ, ಗಂಭೀರ ಸ್ವರೂಪದ ವ್ಯಸನಗಳಿಗೆ ತುತ್ತಾಗುತ್ತಿರುವುದು ವಿಷಾದನೀಯ. ಹದಿಹರೆಯದ ವಿದ್ಯಾರ್ಥಿಗಳು ಮೌಲ್ಯಗಳ ಬಗ್ಗೆ ಅರಿವಿಲ್ಲದೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ನೈತಿಕತೆ, ಮಾದಕ ವಸ್ತುಗಳ ಸೇವನೆಯಿಂದಾಗುವ ಅಪಾಯ, ಪರೀಕ್ಷಾ ಭಯ, ಇತ್ಯಾದಿ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಶಿಕ್ಷಕರಿಗೆ ತರಬೇತಿ ನೀಡುವುದರ ಮೂಲಕ ವಿದ್ಯಾರ್ಥಿ ಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಇತ್ತ ಗಮನಹರಿಸಿ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.
ಎಚ್.ಎಸ್.ಟಿ. ಸ್ವಾಮಿ, ಚಿತ್ರದುರ್ಗ
ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ವಿರೋಧಿಸಿದ ಪೋಷಕರು, ಮಕ್ಕಳ ವರ್ಗಾವಣೆ ಪತ್ರ ಪಡೆದಿದ್ದಾರೆ (ಪ್ರ.ವಾ., ಆಗಸ್ಟ್ 14). ಶಾಲೆಯ ಹತ್ತಿರ ದೇವಸ್ಥಾನ ಇರುವುದರಿಂದ ನಮ್ಮ ಆಚಾರ ವಿಚಾರಕ್ಕೆ ಧಕ್ಕೆಯಾಗಲಿದೆ ಎನ್ನುವುದು ಅವರ ವಾದ. ಮಕ್ಕಳ ಆರೋಗ್ಯಕ್ಕಿಂತ ಧಾರ್ಮಿಕ ಆಚಾರವೇ ಮುಖ್ಯವಾಗಿರುವ ಇಂಥ ಧೋರಣೆಗೆ ಏನು ಹೇಳಬೇಕೆಂದು ತಿಳಿಯದಾಗಿದೆ.
ನಂಜನಹಳ್ಳಿ ನಾರಾಯಣ, ಬೆಂಗಳೂರು
ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಇವರ ಬೇಡಿಕೆ ಈಡೇರಿಸುವ ಬದಲು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಹಳ್ಳಿಗಳಲ್ಲಿ ಈ ಕಾರ್ಯಕರ್ತೆಯರು ಜವಾಬ್ದಾರಿ ಹೊತ್ತುಕೊಂಡು ಕೆಲಸ ನಿರ್ವಹಿಸುತ್ತಿ ದ್ದಾರೆ. ಕೋವಿಡ್ ಸಮಯದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಮರೆಯಲು ಸಾಧ್ಯವೇ? ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ಭರವಸೆ ಕೊಟ್ಟಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೇ ನೀಡಿದ ಭರವಸೆಯನ್ನು ಈಡೇರಿಸುತ್ತಿಲ್ಲ ಏಕೆ? ಕಾರ್ಯಕರ್ತೆಯರು ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವುದರಿಂದಲೇ ಗ್ರಾಮೀಣ ಪ್ರದೇಶದಲ್ಲಿ ಶಿಶು ಮತ್ತು ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಆಳುವ ವರ್ಗ ಮರೆಯಬಾರದು.
ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರು, ಸ್ಪೀಕರ್ ಅವರ ವೇತನ ಮತ್ತು ಭತ್ಯೆಯನ್ನು ಯಾವುದೇ ಚರ್ಚೆ ಇಲ್ಲದೆ ದುಪ್ಪಟ್ಟು ಹೆಚ್ಚಿಸಲಾಗಿದೆ. ಹೀಗಿದ್ದಾಗ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡದಿರುವುದು ಯಾವ ನ್ಯಾಯ?
ನಬಿ ಆರ್.ಬಿ. ದೋಟಿಹಾಳ, ಕುಷ್ಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.