‘ಪ್ರಶ್ನೆಗಳು ಬೇಡವಾದ ಹೊತ್ತಿನಲ್ಲಿ’ ಎಂಬ ಬರಹದಲ್ಲಿ (ಸಂಗತ, ಜುಲೈ 15) ಎಚ್.ಕೆ.ಶರತ್ ಅವರು ಎತ್ತಿರುವ ಪ್ರಶ್ನೆಗಳು ಓದು, ಬರಹದ ಶಿಕ್ಷಣ ಪಡೆದಿರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿ ತಾನೇ ಕೇಳಿಕೊಳ್ಳಬೇಕಾದಂತಹವಾಗಿವೆ.
ವಿಜ್ಞಾನದಿಂದ ನೀವು ಇದುವರೆಗೂ ಕಲಿತಿರುವುದೇನು? ಧಾರ್ಮಿಕ ಪಠ್ಯಗಳಿಗೂ ವಿಜ್ಞಾನದ ಪಠ್ಯಗಳಿಗೂ ಇರುವ ವ್ಯತ್ಯಾಸವೇನು? ಪ್ರಶ್ನೆಗಳು ಮತ್ತು ಬದಲಾವಣೆಗೆ ತನ್ನನ್ನು ತೆರೆದುಕೊಂಡಿರುವ ವಿಜ್ಞಾನ ಮತ್ತು ಪ್ರಶ್ನೆಗಳನ್ನು ಸಹಿಸದ ಹಾಗೂ ಬದಲಾವಣೆಗೆ ತೆರೆದುಕೊಳ್ಳದ ಧರ್ಮ- ಇವೆರಡರಲ್ಲಿ ಯಾವುದು ಮನುಕುಲಕ್ಕೆ ಸೂಕ್ತವೆಂದು ನೀವೇ ನಿರ್ಧರಿಸಿ.
ಮೇಲು ಕೀಳಿನ ಜಾತಿ ವ್ಯವಸ್ಥೆಯಲ್ಲಿ ಹುಟ್ಟಿ ಬೆಳೆದಿರುವ ನಮ್ಮೆಲ್ಲರ ಮೈಮನದಲ್ಲಿ ಜಾತಿಯ ವಿಷಬೇರು ಆಳವಾಗಿ ಬೇರೂರಿದೆ. ಶಿಕ್ಷಣವನ್ನು ಪಡೆಯದ ವ್ಯಕ್ತಿಗಳ ಪಾಲಿಗೆ ಜಾತಿ ಮತ್ತು ಧರ್ಮ ಎಂಬುದು ಬದುಕಿನ ಒಂದು ವಾಸ್ತವವಾಗಿದೆ. ಆದ್ದರಿಂದಲೇ ಅವರು ಅದರ ಎಲ್ಲೆಯೊಳಗೆ ಬದುಕನ್ನು ನಡೆಸುತ್ತಿದ್ದಾರೆ. ಆದರೆ ಶಿಕ್ಷಿತರ ಪಾಲಿಗೆ ಜಾತಿ ಮತ್ತು ಧರ್ಮ ಎಂಬುದು ಸಂಪತ್ತು ಮತ್ತು ಅಧಿಕಾರವನ್ನು ಪಡೆಯಲು, ಪಡೆದುದನ್ನು ಉಳಿಸಿಕೊಳ್ಳಲು ಒಂದು ಪ್ರಮುಖವಾದ ಆಯುಧವಾಗಿದೆ. ಆದ್ದರಿಂದಲೇ ಶಿಕ್ಷಿತರಾದ ನಮ್ಮೆಲ್ಲರಿಗೂ ವಿಜ್ಞಾನದ ಉಪಕರಣಗಳು ಬದುಕಿನ ಅನುಕೂಲಕ್ಕೆ ಬೇಕು. ಸಹಮಾನವರನ್ನು ಸುಲಿಗೆ ಮಾಡುವುದಕ್ಕೆ, ವಂಚಿಸುವುದಕ್ಕೆ ಮತ್ತು ಅತ್ಯಂತ ಕ್ರೌರ್ಯದ ನಡೆನುಡಿಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಧರ್ಮ ಬೇಕು.
ಸಿ.ಪಿ.ನಾಗರಾಜ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.