ಕಾಮಗಾರಿ ಭ್ರಷ್ಟಾಚಾರದ ಬಗೆಗಿನ ಸಂಪಾದಕೀಯದ (ಪ್ರ.ವಾ., ಏ. 14) ಒಟ್ಟಾರೆ ನಿಲುವು ಸರಿಯಾಗಿದೆ. ಆದರೆ ತಳಮಟ್ಟದಲ್ಲಿ ರಾಜಕಾರಣಿಗಳ ಪಾತ್ರ ಮೊದಲು ಬರುತ್ತದೆ, ಆಪ್ತ ಸಹಾಯಕರು, ಅಧಿಕಾರಿಗಳು ಆಮೇಲೆ ಎಂಟ್ರಿ ಕೊಡುತ್ತಾರೆ. ಮೃತ ವ್ಯಕ್ತಿ ಮೊದಲು ಬೇರೆ ಪಕ್ಷದ ಸದಸ್ಯನಾಗಿದ್ದ ಎಂಬಂತಹ ರಕ್ಷಣಾ ತಂತ್ರವೂ ಆರಂಭವಾಗಿದೆ. ಬಾಯಿಮಾತಿನ ಮಂಜೂರಿ ಕೊಟ್ಟಿದ್ದರೆ ಕಾಮಗಾರಿ ಆರಂಭವಾದ ಮೇಲಾದರೂ ಕ್ರಮಬದ್ಧ ಸ್ವೀಕೃತಿ ನೀಡಿದರೆ ಮಾತ್ರ ಪಾವತಿಯ ಪ್ರಶ್ನೆ ಬರುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸುತ್ತಿರುವ ತನಿಖೆಯ ಪ್ರಾಥಮಿಕ ವರದಿಯನ್ನು ಸರ್ಕಾರ ಕೂಡಲೇ ಬಹಿರಂಗಪಡಿಸಬೇಕು.
ಅಧಿಕಾರಾರೂಢ ಪಕ್ಷಗಳು ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಪಕ್ಷದ ವತಿಯಿಂದ ಎಷ್ಟು ಹಣ ವಿನಿಯೋಗಿಸಲಾಯಿತು ಎಂಬುದನ್ನು ಯಾರೂ ಹೇಳುತ್ತಿಲ್ಲ, ಕೇಳುತ್ತಿಲ್ಲ. ಅದಲ್ಲದೆ ಹಲವರು ಅದನ್ನು ಆರ್ಥಿಕವಾಗಿ ಪ್ರಾಯೋಜಿಸಿರುತ್ತಾರೆ. ಆ ಪೈಕಿ ಕೆಲವರು ಮುಂದೆ ಸರ್ಕಾರಿ ಕಾಮಗಾರಿಗಳ ‘ಫಲಾನುಭವಿ’ಗಳಾಗುತ್ತಾರೆ. ಚುನಾವಣಾ ಪ್ರಚಾರದ ಅವಧಿ ಬಿಟ್ಟು ಮೆಗಾ ಕಾರ್ಯಕ್ರಮಗಳ ವೆಚ್ಚದ ಬಗೆಗೆ ಲೆಕ್ಕ ನೀಡುವ ವ್ಯವಸ್ಥೆ ಎಲ್ಲಿದೆ? ಒಂದು ದೊಡ್ಡ ಕಾಮಗಾರಿ ಹಲವು ಪೀಸ್ ವರ್ಕ್ಗಳಾಗಿ ಬೇರೆ ಬೇರೆ ಹೆಸರಿನಲ್ಲಿ ಕೆಲವೇ ವ್ಯಕ್ತಿಗಳ ಕೈಸೇರುವುದು ಒಂದು ‘ಕಲೆ’ಯಾಗಿ ಅಭಿವೃದ್ಧಿಗೊಂಡಿದೆ. ಸಮಿತಿ, ತನಿಖೆಗಳು ಇದನ್ನು ಹೊರಹಾಕಿದರೂ ಅಂತಿಮವಾಗಿ ಕಾರ್ಯಾಂಗವೇ ಕ್ರಮ ಕೈಗೊಳ್ಳಬೇಕಲ್ಲ. ನ್ಯಾಯಾಲಯಗಳು ಎಲ್ಲ ಪ್ರಕರಣಗಳಲ್ಲಿ ಪ್ರೊ-ಆಕ್ಟಿವ್ ಆಗಲು ಸಾಧ್ಯವೇ? ಒಟ್ಟಿನಲ್ಲಿ ಚುನಾವಣಾ ವರ್ಷದಲ್ಲಿ ಈ ಪರ್ಸೆಂಟೇಜ್ ದಂಧೆಗೆ ಕಡಿವಾಣ ಬೀಳುವ ಸಂಭವ ಕಡಿಮೆ.
ಎಚ್.ಎಸ್.ಮಂಜುನಾಥ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.