ADVERTISEMENT

ಕೋರ್ಟ್‌ಗೆ ಅಲೆಯುವುದು ತಪ್ಪಲಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 16:12 IST
Last Updated 15 ನವೆಂಬರ್ 2021, 16:12 IST

ನಮ್ಮ ನ್ಯಾಯಾಂಗ ವ್ಯವಸ್ಥೆ ಕುರಿತು ‘ಗೆದ್ದೋನು ಸೋತ ಸೋತೋನು ಸತ್ತ’ ಎನ್ನುವ ಮಾತೊಂದಿದೆ. ಇತ್ತೀಚೆಗೆ ನಿಷ್ಠಾವಂತ ಕಾರ್ಯಕರ್ತರನ್ನ ಸಂಘವೊಂದು ಪ್ರಾಥಮಿಕ ಸದಸ್ಯತ್ವದಿಂದಲೇ ಹೊರಹಾಕಿದಾಗ,‘ಕೋರ್ಟಿಗೆ ಹೋಗ್ರಿ, ಖಂಡಿತ ಕೇಸ್ ನಿಮ್ಮ ಪರವಾಗಿ ಆಗುತ್ತೆ’ ಎನ್ನುವ ಮಾತು ಸಹಜವಾಗಿ ಬಂತು. ಹೌದು, ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು, ನಿಷ್ಠಾವಂತರಿಗೆ ನ್ಯಾಯ ಸಿಗುವ ಕುರಿತು ವಿಶ್ವಾಸ, ನಂಬಿಕೆ ಹೊಂದಿರುವ ಯಾರೂ ಹೇಳುವ ಮಾತೇ ಅದು. ಹಾಗೆಯೇ ಇನ್ನೊಂದು ವಾದ ಹೀಗಿದೆ, ‘ಯಾಕ್ರೀ ಕೋರ್ಟಿಗೆ ಹೋಗಿ ಸಾಯ್ತೀರಿ, ನೀವು ಗೆಲ್ಲತೀರಿ ಅನ್ನೋದರಲ್ಲಿ ಅನುಮಾನಾನೇ ಇಲ್ಲ. ಆದರೆ ನಿಮ್ಮ ನೆಮ್ಮದಿ ಹಾಳು, ದುಡ್ಡು ಹಾಳು, ಕ್ರಿಯಾಶೀಲತೆ ಸತ್ತುಹೋಗುತ್ತೆ, ಎಲ್ಲದಕ್ಕೂ ಹೆಚ್ಚಾಗಿ ಅಮೂಲ್ಯ ಸಮಯವನ್ನ ಕಳಕೊಳ್ತೀರಿ!’ ಇತ್ಯಾದಿ. ಈ ಸಮಯ ಕಳೆದುಕೊಳ್ಳುವುದು ಎನ್ನುವುದು ಪ್ರಜ್ಞಾವಂತರನ್ನು ಧೃತಿಗೆಡಿಸುವ ಅಂಶ. ದಕ್ಕುವ ನ್ಯಾಯದ ಬಗೆಗೆ ನಂಬಿಕೆಯಿದ್ದರೂ ನ್ಯಾಯಾಂಗದ ಕಟ್ಟೆಯೇರಲು ಹಿಂದೇಟು ಹಾಕುತ್ತಾರೆ ಈ ಅಮೂಲ್ಯ ಸಮಯದ ಮಹತ್ವ ಅರಿತವರು.

‘... ಮರುಪರೀಕ್ಷೆ ಅಸಾಧ್ಯ’ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ವರದಿಯನ್ನು (ಪ್ರ.ವಾ., ನ. 13) ಓದಿದಾಗ, ಈ ತೀರ್ಪು ಬಹಳ ತ್ವರಿತವಾಗಿ ಬಂದಿದೆಯಾದರೂ ಯಾರದ್ದೋ ತಪ್ಪಿಗೆ ಇಬ್ಬರು ವಿದ್ಯಾರ್ಥಿಗಳ ಭವಿಷ್ಯ ಮಂಕಾದದ್ದು ನೋವು ತರಿಸಿತು. ಒಂದು ಪರೀಕ್ಷೆಯ ಸಲುವಾಗಿ ಎಷ್ಟು ಸಮಯವನ್ನು ವಿದ್ಯಾರ್ಥಿಗಳು ವ್ಯಯಿಸಿರುತ್ತಾರೆ, ಅವರ ಶ್ರಮ ಎಂತಹದು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯ ಕೊಡಿಸುವ ಕೆಲಸವಾಗಬೇಕು. ಸಮಯ ಅಮೂಲ್ಯವಾದದ್ದೇ, ಅದು ಯಾರನ್ನೂ ಕಾಯುವುದಿಲ್ಲ, ಅಲ್ಲವೇ?

-ಕಾಂತೇಶ ಕದರಮಂಡಲಗಿ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.