ಹಾವೇರಿ ಜಿಲ್ಲೆ, ರಟ್ಟೇಹಳ್ಳಿ ತಾಲ್ಲೂಕಿನ ಕಿರಿಗೇರಿ ಎಂಬ ಗ್ರಾಮದಲ್ಲಿ ಕಂಪನಿಯೊಂದು ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕಾಗಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಪಡೆದು ಕಲ್ಲುಪುಡಿ ಮಾಡಿ ವ್ಯಾಪಕವಾಗಿ ಮಾರಾಟ ಮಾಡುತ್ತಿದೆ ಎಂಬ ದೂರುಗಳಿವೆ. ಇದರಿಂದ ವಾಯು ಮತ್ತು ದೂಳು ಮಾಲಿನ್ಯ ಉಂಟಾಗಿದ್ದು, ಇದರ ವಿರುದ್ಧ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಸಮಾಜ ಪರಿವರ್ತನ ಸಮುದಾಯವು ಬೆಂಬಲ ನೀಡಿದೆ. ಈ ಹೋರಾಟಕ್ಕೆ ಮಣಿದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಲ್ಲುಪುಡಿ ಮಾಡುವ ಘಟಕವನ್ನು ನಿಲ್ಲಿಸುವಂತೆ ಕಂಪನಿಗೆ ಮತ್ತು ಘಟಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಹಾಗೂ ಘಟಕಕ್ಕೆ ವಿದ್ಯುತ್ ಸರಬರಾಜನ್ನು ನಿಲ್ಲಿಸುವಂತೆ ಸಂಬಂಧಿಸಿದ ವಿದ್ಯುತ್ ಕಂಪನಿಗೆ ನಿರ್ದೇಶನ ನೀಡಿದೆ. ಜನಾಂದೋಲನಕ್ಕೆ ಹಾಗೂ ಜನಾಗ್ರಹಕ್ಕೆ ದೊರೆತ ಜಯ ಇದಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಮಂಡಳಿಯು ತೆಗೆದುಕೊಂಡ ಕ್ರಮವು ಸ್ವಾಗತಾರ್ಹವಾಗಿದೆ. ಪರಿಸರ ಸಂರಕ್ಷಣೆ ಬಗ್ಗೆ ಗ್ರಾಮಸ್ಥರು ನಡೆಸಿದ ಹೋರಾಟವು ಅನುಕರಣೀಯವಾದುದಾಗಿದೆ.
- ಟಿ.ಆರ್.ಚಂದ್ರಶೇಖರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.