ಧಾರವಾಡದಲ್ಲಿ ಇತ್ತೀಚೆಗೆ ಬಹುಮಹಡಿ ಕಟ್ಟಡ ಕುಸಿದು ಹಲವರು ಮೃತಪಟ್ಟರು. ಇವರ ಕುಟುಂಬಗಳಿಗೆ ಸರ್ಕಾರ ತಲಾ ₹2 ಲಕ್ಷ ಪರಿಹಾರ ವಿತರಿಸಿ ಕೈತೊಳೆದುಕೊಂಡಿತು. ಕೆಲವು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಬಸ್ಸೊಂದು ನಾಲೆಗೆ ಉರುಳಿ ಹಲವರು ಮೃತಪಟ್ಟಿದ್ದರು. ಅವರ ಕುಟುಂಬಗಳಿಗೆ ಸರ್ಕಾರ ತಲಾ ₹5 ಲಕ್ಷ ಪರಿಹಾರ ವಿತರಿಸಿತು. ಜೀವಕ್ಕೆ ಬೆಲೆ ಎನ್ನುವುದು ಜಗತ್ತಿನ ಎಲ್ಲೆಡೆ ಒಂದೇ ಇರುತ್ತದೆ. ಆದರೆ ಪ್ರಾಂತ್ಯ, ಪಕ್ಷ, ರಾಜಕೀಯ ವಾತಾವರಣ, ಅವಘಡಗಳ ಹಿನ್ನೆಲೆ ಆಧರಿಸಿ ಪ್ರಾಣಕ್ಕೆ ಬೆಲೆ ಕಟ್ಟುವ ಪದ್ಧತಿ ಅಚ್ಚರಿಯ ಸಂಗತಿ!
ಎರಡೂ ಪ್ರಕರಣಗಳಲ್ಲಿ ಸರ್ಕಾರದ ನೇರ ಪಾತ್ರವೇನಿರಲಿಲ್ಲ. ಬಸ್ ಮಾಲೀಕ, ಕಟ್ಟಡ ಮಾಲೀಕರ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ ಇತ್ತು. ಮಾನವೀಯತೆಯ ದೃಷ್ಟಿಯಿಂದ ಸರ್ಕಾರವು ಪರಿಹಾರ ನೀಡಿದೆಯಾದರೂ, ಹೀಗೆ ಮೊತ್ತ ನಿಗದಿಯಲ್ಲಿ ತಾರತಮ್ಯ ಮಾಡುವುದು ಅಸಮರ್ಥನೀಯ. ಇಂಥ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಯಾರಿಗೇ ಆದರೂ ಈ ಭೇದ ಎದ್ದು ಕಾಣುತ್ತದೆ. ಇಂಥ ಸಂಗತಿಗಳೇ ಮತ್ತೆ ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ, ಅನಾದರ- ಪ್ರತ್ಯೇಕತಾಭಾವ ಮೂಡಿಸುತ್ತವೆ. ಮಾನವೀಯತೆಯ ಸಂವೇದನೆಯನ್ನೇ ಕಳೆದುಕೊಂಡು, ಎಲ್ಲದರಲ್ಲಿಯೂ ಮತಬ್ಯಾಂಕ್ ರಾಜಕಾರಣ ಮಾಡಹೊರಟರೆ ನಾವು ಎಲ್ಲಿಗೆ ಹೋಗಿ ತಲುಪುತ್ತೇವೆ?
ಡಾ. ಚನ್ನು ಅ. ಹಿರೇಮಠ,ರಾಣೆಬೆನ್ನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.