ADVERTISEMENT

ಎಚ್ಚೆತ್ತುಕೊಳ್ಳಬೇಕಾದವರು ಯಾರೆಂದರೆ...

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:01 IST
Last Updated 9 ಮೇ 2019, 19:01 IST

ಮಾಧ್ಯಮಗಳ ಇಂದಿನ ಸ್ಥಿತಿಗತಿ ಕುರಿತು ಕೃಷ್ಣ ಪ್ರಸಾದ್ ಅವರು ಬರೆದಿರುವ ‘ಮಾಧ್ಯಮವೃಕ್ಷ ಕೊಳೆಯುತ್ತಿದೆಯೇ?’ ಲೇಖನ (ಪ್ರ.ವಾ., ಮೇ 9) ತುಂಬಾ ಸೂಕ್ತವಾಗಿದೆ.

ಬೆಳಿಗ್ಗೆ ಎದ್ದು ಟಿ.ವಿ. ಹಾಕಿದರೆ ಭಯ ಹುಟ್ಟಿಸುವ ಜ್ಯೋತಿಷಿಗಳ ದರ್ಶನ. ಮನರಂಜನೆ ಚಾನೆಲ್ ನೋಡಿದರೆ ಕಾಮೋದ್ರೇಕಗೊಳಿಸುವ ಸಿನಿಮಾ ಹಾಡುಗಳು, ಅತ್ತೆ– ಸೊಸೆ ಅಥವಾ ತ್ರಿಕೋನ ಪ್ರೇಮ ಕಥೆಯಾಧಾರಿತ, ಒಂದೇ ಮನೆಯಲ್ಲಿ ಒಬ್ಬರು ಇನ್ನೊಬ್ಬರನ್ನು ಕೊಲ್ಲುವ, ದ್ವೇಷ ಹುಟ್ಟಿಸುವ ಧಾರಾವಾಹಿಗಳು, ವಾಕರಿಕೆ ತರಿಸುವ ಬ್ರೇಕಿಂಗ್ ನ್ಯೂಸ್‌ಗಳು... ಇವುಗಳನ್ನು ಸಹಿಸಿಕೊಳ್ಳದೆ ಜನ ಕ್ರಿಕೆಟ್ ನೋಡಲು ಹೋದರೆ ಅಲ್ಲಿಯೂ ಹಲವರಿಗೆ ನಿರಾಸೆಯೇ ಕಾದಿರುತ್ತದೆ.

ಅದು ಈಗ ಮನರಂಜನಾತ್ಮಕ ಆಟವಾಗಿ ಉಳಿದಿಲ್ಲ. ಬದಲಿಗೆ ಬೆಟ್ಟಿಂಗ್‌ಗೋಸ್ಕರವೇ ಕ್ರಿಕೆಟ್ ನೋಡಬೇಕು ಎಂಬಷ್ಟು ವಾತಾವರಣ ಹಾಳಾಗಿದೆ. ಆನ್‌ಲೈನ್‌ ಬೆಟ್ಟಿಂಗ್ ಅಂತೂ ಆಘಾತಕಾರಿಯಾಗಿ ಬೆಳೆಯುತ್ತಿದೆ.

ADVERTISEMENT

ಕೆಲವು ಟಿ.ವಿ ಮತ್ತು ಪತ್ರಿಕೆಗಳನ್ನು ನೋಡಿದರೆ, ಅವು ಒಂದು ಪಕ್ಷದ ಪರ ವಾಲಿರುವುದು ಜನಸಾಮಾನ್ಯನಿಗೂ ಅರ್ಥವಾಗುತ್ತದೆ. ನಿಖರ, ನೇರ, ಸತ್ಯ ಆಧಾರಿತ ವರದಿಗಳು ಸಾಮಾನ್ಯ ಪ್ರಜೆಗೆ ಸಿಗುವುದು ಕಷ್ಟ ಎಂಬಂತಾಗಿದೆ. ರಾಜಕಾರಣಿಗಳು, ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿದಿನ ವರದಿ ಮಾಡುವ ಮಾಧ್ಯಮಗಳು ಸ್ವತಃ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.
-ಎಸ್.ನಾಗರಾಜ ನಾಗೂರ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.