ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ಮುತ್ಸದ್ದಿ. ಸತತ ಒಂಬತ್ತು ಸಲ ವಿಧಾನಸಭೆಗೆ ಆರಿಸಿಬಂದಿದ್ದಾರೆ. ಹತ್ತು ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದು, ಐದು ವರ್ಷ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದರು.
ಕಳೆದ ನಾಲ್ಕು ದಶಕಗಳಲ್ಲಿ ಅವರು ಬೇರೆಬೇರೆ ಅವಧಿಗಳಲ್ಲಿ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ಸಾರ್ವಜನಿಕ ಜೀವನ ಮತ್ತು ಆಡಳಿತದ ಅಪಾರ ಅನುಭವವಿರುವ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದಿಲ್ಲ.
ಕಾಂಗ್ರೆಸ್ನ ಎಷ್ಟೋ ಜನ ತಮ್ಮ ಜಗಳಗಳನ್ನು ಬೀದಿಗೆ ತಂದು ರಂಪಾಟ ಮಾಡಿದಂತೆ, ಮರ್ಯಾದೆಗೆಟ್ಟು ವರ್ತಿಸಿದಂತೆ, ಅಧಿಕಾರದ ಮೇಲಿನ ದುರಾಸೆಯಿಂದ ಅವಕಾಶವಾದ ತೋರಿದಂತೆ ಖರ್ಗೆಯವರು ಯಾವತ್ತೂ ಮಾಡಿಲ್ಲ.
ಸುಮಾರು 50 ವರ್ಷಗಳ ಕಾಲ ಪಕ್ಷವು ತಮಗೆ ಕೊಟ್ಟ ಯಾವುದೇ ಜವಾಬ್ದಾರಿಯನ್ನು ತುಂಬ ಶ್ರದ್ಧೆ ಮತ್ತು ಘನತೆಯಿಂದ ಪೂರೈಸಿದ ನಾಯಕ ಇವರು. ‘ನಾನು ದಲಿತ ಎಂಬ ಕಾರಣಕ್ಕೆ ಸಿ.ಎಂ ಪಟ್ಟ ಸಿಗುವುದಾದರೆ, ಅದು ನನಗೆ ಬೇಡ’ ಎಂದವರು. ತಡಮಾಡದೆ ಖರ್ಗೆ ಅವರನ್ನು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸುವ ವಿವೇಕ ಈಗಲಾದರೂ ಕಾಂಗ್ರೆಸ್ಸಿಗರಿಗೆ ಬರಲಿ.
-ರಘುನಂದನ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.