ADVERTISEMENT

ನಿಮ್ಮ ಹೊಟ್ಟೆ ತಣ್ಣಗಿರಲಪ್ಪ...

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 17:51 IST
Last Updated 12 ಆಗಸ್ಟ್ 2019, 17:51 IST

‘ಗಾಲಿಕುರ್ಚಿ ಆಸರೆ, ಅಡ್ಡೆ ಮೂಲಕ ರಕ್ಷಣೆ’ ವರದಿ (ಪ್ರ.ವಾ., ಆ. 12) ಓದಿ ಮನಸ್ಸು ಮೂಕವಾಯಿತು. ನಮ್ಮ ಸೈನಿಕರು, ದೇಶದ ರಕ್ಷಣೆಗಾಗಿ ಗಡಿ ಕಾಯುವ ಬಗ್ಗೆ ಕೇವಲ ಓದಿ ತಿಳಿದಿರುತ್ತೇವೆ. ಆದರೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸೈನಿಕರ ಧೈರ್ಯ, ಸಾಹಸ, ಮಾನವೀಯತೆಯ ನಿಜ ದರ್ಶನವಾಗುತ್ತಿದೆ.

ಒಂದು ಜೀವ ಉಳಿಸಲು 20 ಜನರ ಸೇನಾ ತಂಡವು ಸುಮಾರು 8 ಕಿ.ಮೀ ದೂರದವರೆಗೆ ಕೆಸರು, ಕಲ್ಲುಮುಳ್ಳಿನ ಹಾದಿಯಲ್ಲಿ ಆ ವ್ಯಕ್ತಿಯನ್ನು ಅಡ್ಡೆಯಲ್ಲಿ ಹೊತ್ತು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದು ಅತ್ಯಂತ ಶ್ಲಾಘನೀಯ. ನೆರೆ ಹಾವಳಿಗೆ ತುತ್ತಾದ ಅಷ್ಟೂ ರಾಜ್ಯಗಳಲ್ಲಿ ಹಗಲು ರಾತ್ರಿಯೆನ್ನದೆ ಕಾರ್ಯಾಚರಣೆ ಮಾಡುತ್ತಿರುವ ಸೈನಿಕರ ಬಗ್ಗೆ ಇಂತಹ ಅನೇಕ ಸಾಹಸದ ವಿಡಿಯೊ ನೋಡುವಾಗ, ವರದಿಗಳನ್ನು ಓದುವಾಗ ‘ನಿಮ್ಮ ಹೊಟ್ಟೆ ತಣ್ಣಗಿರಲಪ್ಪ’ ಎಂಬ ಹಾರೈಕೆ ತಾನಾಗೇ ಹೊರಡುತ್ತದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೊ ಒಂದರಲ್ಲಿ ಹೆಣ್ಣು ಮಗಳೊಬ್ಬಳು ತನ್ನನ್ನು ರಕ್ಷಿಸಿದ ಸೈನಿಕನ ಕಾಲು ಮುಟ್ಟಿ ನಮಸ್ಕರಿಸಿರುವುದು, ಸೈನಿಕರು ಮಾಡುತ್ತಿರುವ ರಕ್ಷಣಾ ಕಾರ್ಯದ ಮಹತ್ವವನ್ನು ತಿಳಿಸುತ್ತದೆ. ಈ ಸೈನಿಕರೆಲ್ಲಾ ಯಾವುದೋ ಒಂದು ಪ್ರಶಸ್ತಿಗಾಗಿಯೋ, ಹಣಕ್ಕಾಗಿಯೋ, ಪ್ರಚಾರಕ್ಕಾಗಿಯೋ ರಕ್ಷಣಾ ಕಾರ್ಯ ಮಾಡದೆ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಜಾತಿ ಧರ್ಮ, ಭಾಷೆ, ಪ್ರಾಂತ್ಯಗಳ ಭೇದ ಮಾಡದೆ, ತಮಗೇನೇನೂ ಸಂಬಂಧಪಡದ ವ್ಯಕ್ತಿಗಳ ಜೀವವನ್ನು ಉಳಿಸುತ್ತಿದ್ದಾರೆ. ಶವಗಳನ್ನೂ ಹುಡುಕಿ ಸಂಬಂಧಪಟ್ಟವರಿಗೆ ತಲುಪಿಸುವ ಕಾರ್ಯ ಮಾಡುತ್ತಾ, ಇವೆಲ್ಲ ತಮ್ಮ ಕರ್ತವ್ಯವಷ್ಟೆ ಎಂಬಂತೆ ನಡೆದುಕೊಳ್ಳುವ ನಮ್ಮ ಸೈನಿಕರ ಬಗ್ಗೆ ಹೆಮ್ಮೆಯಾಗುತ್ತಿದೆ.

ADVERTISEMENT

ಸ್ನೇಹಾ ಕೃಷ್ಣನ್, ಕೊರಟಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.