ADVERTISEMENT

‘ಅಭಿನವ...’ ಪ್ರಶಸ್ತಿ: ತರ್ಕರಹಿತ ನಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:11 IST
Last Updated 7 ಜನವರಿ 2020, 19:11 IST

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಕಳವಳಕಾರಿಯಾದ ಸಂಗತಿಯೊಂದು ನಡೆದಿದೆ. ಅದೆಂದರೆ, ಸಾಂಸ್ಕೃತಿಕ ಸಂಸ್ಥೆಯೊಂದು ಕವಿಯೊಬ್ಬರಿಗೆ 60 ವರ್ಷ ತುಂಬಿದ ನೆಪದಲ್ಲಿ ಸಮಾರಂಭ ಏರ್ಪಡಿಸಿ, ‘ಅಭಿನವ ಬೇಂದ್ರೆ’ ಎಂಬ ಪ್ರಶಸ್ತಿ ಪ್ರದಾನ ಮಾಡಿದೆ. ಇದು ನಿಜಕ್ಕೂ ಕಳವಳದ ಸಂಗತಿ. ಯಾವುದೇ ಒಂದು ಪ್ರಶಸ್ತಿಯನ್ನು ಸ್ಥಾಪಿಸುವಾಗ ಸರಿಯಾದ ವಿವೇಚನೆ ಇರಬೇಕು. ‘ಅಭಿನವ ಬೇಂದ್ರೆ’ ಎಂದರೇನು? ತಮ್ಮ ಅನನ್ಯ ಕಾವ್ಯಪ್ರತಿಭೆಯಿಂದ ಕಾಲಾತೀತವಾಗಿರುವ ವರಕವಿ ದತ್ತಾತ್ತೇಯ ರಾಮಚಂದ್ರ ಬೇಂದ್ರೆಯವರಿಗೆ ಸರಿಸಮನಾದ ಅಥವಾ ಪ್ರತಿಭೆ, ಸಾಧನೆ, ಜೀವನದೃಷ್ಟಿ ಮತ್ತು ಅಧ್ಯಯನಗಳ ದೃಷ್ಟಿಯಿಂದ ಅವರ ವಾರಸುದಾರರು ಎನ್ನಬಹುದಾದವರು ಎಂಬುದು ಇದರ ಅರ್ಥ.

ವ್ಯಾಸರಿಗೆ ಸರಿಸಮನಾಗಿ ಮಹಾಭಾರತವನ್ನು ಉಜ್ವಲವಾಗಿ ರಚಿಸಿದ ಗದುಗಿನ ನಾರಣಪ್ಪ ‘ಕುಮಾರ ವ್ಯಾಸ’ನಾಗಿದ್ದರಲ್ಲಿ ತಪ್ಪೇನಿಲ್ಲ. ಕನ್ನಡ ಜನಸಮೂಹ ಕೂಡ ಆತನನ್ನು ‘ಕುಮಾರವ್ಯಾಸ’ನೆಂದೇ ಒಪ್ಪಿ, ಹಾಗೆಯೇ ಗುರುತಿಸಿಕೊಂಡು ಬಂದಿದೆ. ಇಂತಹ ಒಂದು ತರ್ಕದ ಬಗ್ಗೆ ‘ಅಭಿನವ ಬೇಂದ್ರೆ’ ಪ್ರಶಸ್ತಿಯನ್ನು ಕೊಟ್ಟವರು ಯೋಚಿಸಿದಂತಿಲ್ಲ. ಬೇಂದ್ರೆಯವರಿಗೆ ಸರಿಸಮನಾಗಿ ನಿಲ್ಲಬಲ್ಲಂತಹ ಕವಿಯೊಬ್ಬ ಬರುವುದು ಅಸಂಭವ. ಹೀಗಿರುವಾಗ ಬೇಕಾಬಿಟ್ಟಿಯಾಗಿ ಹೀಗೆ ಪ್ರಶಸ್ತಿಗಳನ್ನು ಕೊಡುತ್ತಾ ಹೋದರೆ, ಈಗಾಗಲೇ ಸಾರ್ವಜನಿಕರ ನಂಬಿಕೆ- ವಿಶ್ವಾಸವನ್ನು ಕಳೆದುಕೊಂಡಿರುವ ಸಾಹಿತ್ಯ ಕ್ಷೇತ್ರವು ಮತ್ತಷ್ಟು ನಗೆಪಾಟಲಿಗೆ ಈಡಾಗುವುದ
ರಲ್ಲಿ ಸಂಶಯವಿಲ್ಲ. ನಾಳೆ ಹೀಗೆಯೇ ಇನ್ನು ಕೆಲವರು ‘ಅಭಿನವ ಕುವೆಂಪು’, ‘ಅಭಿನವ ಡಿವಿಜಿ’, ‘ಅಭಿನವ ಅಡಿಗ’ ಇತ್ಯಾದಿ ಪ್ರಶಸ್ತಿಗಳನ್ನು ಕೊಡಲು ಮುಂದಾದರೆ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮೇಲಕ್ಕೆ ಎತ್ತುವವರ‍್ಯಾರು?

- ಬಿ.ಎಸ್.ಜಯಪ್ರಕಾಶ ನಾರಾಯಣ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.