ಆಸ್ಟ್ರೇಲಿಯಾದಲ್ಲಿ ನೀರಿನ ಕೊರತೆಯ ಕಾರಣದಿಂದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿರುವುದು (ಪ್ರ.ವಾ., ಜ. 9) ಹೃದಯವಿದ್ರಾವಕ ಸುದ್ದಿ. ಇದನ್ನು ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಕಾಳ್ಗಿಚ್ಚಿನಿಂದ ತತ್ತರಿಸಿ ನೀರಿಗೆ ಹಾಹಾಕಾರ ಉಂಟಾಗಿರುವ ಕಾರಣಕ್ಕೆ ಮೂಕಪ್ರಾಣಿಗಳ ಜೀವ ತೆಗೆಯುವುದು ಸರಿಯೇ? ಹೀಗೆ ಒಂದೊಂದು ಉದ್ದೇಶಕ್ಕೆ ಒಂದೊಂದು ಸಂತತಿಯನ್ನು ಕೊಲ್ಲುತ್ತಾ ಹೋದರೆ, ಇಡೀ ಪ್ರಾಣಿಸಂಪತ್ತೇ ನಶಿಸಿಹೋದೀತು!
ಅಲ್ಲಿನ ಸರ್ಕಾರ ಇಂತಹ ಕಠಿಣ ಕ್ರಮ ಕೈಗೊಳ್ಳುವುದಕ್ಕಿಂತ, ಈ ಪ್ರಾಣಿಗಳನ್ನು ತನ್ನ ದೇಶದ ಇತರೆಡೆಗೆ ಸ್ಥಳಾಂತರಿಸುವುದು ಅಥವಾ ಅನ್ಯ ದೇಶಗಳಿಗೆ ಹಸ್ತಾಂತರಿಸುವುದು ಲೇಸು. ಇಲ್ಲದಿದ್ದರೆ ಈ ಪ್ರಾಣಿಗಳಿಗೆ ಸಮುದ್ರದ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ವಿವಿಧ ಕಾರಣಗಳಿಗೆ ಪ್ರಾಣಿಬಲಿ ಮುಂದುವರಿದರೆ, ಮುಂದೊಂದು ದಿನ ಮನುಷ್ಯರೇ ಮನುಷ್ಯರನ್ನು ತಮ್ಮ ಸ್ವಾರ್ಥಕ್ಕಾಗಿ ಸಾಮೂಹಿಕ ಬಲಿ ತೆಗೆದುಕೊಳ್ಳುವ ದಿನಗಳೂ ಬರಬಹುದು.
ಅಭಿಲಾಷ್ ನಾಟೇಕರ್,ಬೀದರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.