ಯಲಹಂಕ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಉತ್ತರ ತಾಲ್ಲೂಕುಗಳಲ್ಲಿನ ಕೋಟ್ಯಂತರ ರೂಪಾಯಿ ಬೆಲೆಬಾಳುವ 37 ಎಕರೆ ಸರ್ಕಾರಿ ಗೋಮಾಳವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲು ಮುಂದಾಗಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 26). ಇದು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯದ ಹಲವು ಗ್ರಾಮಗಳಲ್ಲಿ ಸರ್ಕಾರಿ ಗೋಮಾಳವು ಉಳ್ಳವರ ಕೈಯಲ್ಲಿದೆ. ಗೋಮಾಳದ ಪಕ್ಕದಲ್ಲಿ ಇರುವ ಜಮೀನುದಾರರು ಗೋಮಾಳವನ್ನು ನಿರಂತರವಾಗಿ ಒತ್ತುವರಿ ಮಾಡಿಕೊಳ್ಳುತ್ತಾ ಬಂದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗಳ ಕಡೆ ಸುಳಿಯುತ್ತಿಲ್ಲ. ಗೋಮಾಳ, ಗೋಕಟ್ಟೆಗಳನ್ನು ರಕ್ಷಣೆ ಮಾಡಬೇಕಾದುದು ಕಂದಾಯ ಇಲಾಖೆಯ ಕರ್ತವ್ಯ. ಆದರೆ ಯಾರಾದರೂ ಇಲಾಖೆಗೆ ದೂರು ಕೊಟ್ಟಾಗ ಮಾತ್ರ ಗೋಮಾಳ ಒತ್ತುವರಿಯಂಥ ಪ್ರಕರಣಗಳು ಬೆಳಕಿಗೆ ಬರುತ್ತವೆ. ಇಲ್ಲವಾದರೆ, ಸಿಕ್ಕಷ್ಟು ವರ್ಷ ಫಸಲು ಬೆಳೆದುಕೊಂಡು, ಉಂಡಷ್ಟೂ ಲಾಭ ಎನ್ನುವಂತೆ ಗೋಮಾಳಗಳ ದುರ್ಬಳಕೆ ಮುಂದುವರಿಯುತ್ತಲೇ ಇರುತ್ತದೆ.
ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು. ಪ್ರತೀ ಊರಿನಲ್ಲಿ ಇರುವ ಗೋಮಾಳ, ಗೋಕಟ್ಟೆಗಳನ್ನು ಸರ್ವೆ ಮಾಡಿಸಿ, ಕಲ್ಲು ನೆಡಿಸಿ ಜನ, ಜಾನುವಾರುಗಳ ಉಪಯೋಗಕ್ಕೆ ಬಳಸಬೇಕು. ಬ್ರಿಟಿಷ್ ಆಡಳಿತದ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ಬಹೂಪಯೋಗಿ ಗೋಮಾಳಗಳನ್ನು ರಕ್ಷಿಸುವ ಹೊಣೆಯನ್ನು ತಾಲ್ಲೂಕು ದಂಡಾಧಿಕಾರಿಗಳು ವಹಿಸಿಕೊಳ್ಳಬೇಕು. ಒತ್ತುವರಿ ಮಾಡುವ ಪ್ರಭಾವಿಗಳಿಗೆ ಕುಮ್ಮಕ್ಕು ನೀಡುವ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು.
ಡಾ. ಶಿವರಾಜ್ ಬ್ಯಾಡರಹಳ್ಳಿ,ಬೆಂಗಳೂರು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.