ADVERTISEMENT

ವಾಚಕರ ವಾಣಿ: ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶವಿರಲಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 18:32 IST
Last Updated 23 ಅಕ್ಟೋಬರ್ 2020, 18:32 IST

ಕೊರೊನಾ ಸೋಂಕು ಕಾಲಿಡುವುದಕ್ಕೆ ಮುನ್ನ ನಾವು ಎಫ್‌ಡಿಎ, ಎಸ್‌ಡಿಎ ಪರೀಕ್ಷೆ ಸಿದ್ಧತೆಗಾಗಿ ನಮ್ಮ ಊರಿನಿಂದ ಬೆಂಗಳೂರಿಗೆ ತೆರಳಿದ್ದೆವು. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಊರಿಗೆ ಮರಳಿದೆವು. ಪರೀಕ್ಷೆಯ ಅರ್ಜಿ ತುಂಬುವಾಗ ಬೆಂಗಳೂರಿನಲ್ಲೇ ಪರೀಕ್ಷಾ ತರಬೇತಿ ಪಡೆಯುತ್ತಿದ್ದುದರಿಂದ, ಕರೆಸ್ಪಾಂಡೆನ್ಸ್‌ ವಿಳಾಸವಾಗಿ ಬೆಂಗಳೂರಿನ ವಿಳಾಸವನ್ನೇ ನಮೂದಿಸಿದ್ದೆವು. ಆದರೆ ಈಗ ನಾವು ಪರೀಕ್ಷಾ ಕೇಂದ್ರವನ್ನು ಬದಲಿಸಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಗೆ ನಾವು ಹಲವಾರು ಬಾರಿ ದೂರವಾಣಿ ಕರೆ ಮಾಡಿದರೂ ಯಾರೂ ಸ್ವೀಕರಿಸಲಿಲ್ಲ. ಕಡೆಗೊಂದು ದಿನ ಸ್ವೀಕರಿಸಿದವರು, ‍ಪರೀಕ್ಷಾ ಕೇಂದ್ರಕ್ಕೆ ಹಿಂದೆ ನೀಡಿದ್ದ ಬೆಂಗಳೂರಿನ ವಿಳಾಸವನ್ನೇ ಪರಿಗಣಿಸುವುದಾಗಿ ತಿಳಿಸಿದರು. ಕೊರೊನಾ ಸೋಂಕು ವ್ಯಾಪಿಸಿರುವ ಈ ಸಂದರ್ಭದಲ್ಲಿ ಬೆಂಗಳೂರಿಗೆ ಹೋಗಿ ಪರೀಕ್ಷೆ ಬರೆಯುವುದು ತುಂಬಾ ಕಷ್ಟದ ಸಂಗತಿ. ಪರೀಕ್ಷೆಗೆಂದು ಹೋದಾಗ ದುರದೃಷ್ಟವಶಾತ್‌ ನಮಗೇನಾದರೂ ಕೊರೊನಾ ಸೋಂಕು ತಗುಲಿದರೆ, ಮನೆಯಲ್ಲಿರುವ ವಯಸ್ಸಾದ ತಂದೆತಾಯಿಯ ಜೀವಕ್ಕೂ ಅಪಾಯ ಇರುತ್ತದೆ. ಕೋವಿಡ್‌ ಕಾರಣದಿಂದ ಕೆಲ ದಿನಗಳ ಹಿಂದೆ ನಮ್ಮ ಕುಟುಂಬದ ಕೆಲ ಸದಸ್ಯರು ಸಹ ನಲುಗಿದ್ದಾರೆ. ಜೊತೆಗೆ ಹೆಚ್ಚು ಹಣ ಖರ್ಚು ಮಾಡಿಕೊಂಡು ಬೆಂಗಳೂರಿಗೆ ಬರುವುದು ನನ್ನಂತಹ ಬಡವರಿಗೆ ಒಂದು ಸವಾಲೇ ಆಗಿರುತ್ತದೆ. ಆಯೋಗವು ಪರೀಕ್ಷಾ ಕೇಂದ್ರವನ್ನು ಬದಲಿಸಲು ಅವಕಾಶ ಮಾಡಿಕೊಡುವ ಮೂಲಕ ಸಾವಿರಾರು ಪರೀಕ್ಷಾ ಆಕಾಂಕ್ಷಿಗಳ ನೆರವಿಗೆ ಬರಬೇಕು.

-ಜ್ಯೋತಿ, ಹುಬ್ಬಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.