ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂರಹಿತ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಜಮೀನು ನೀಡುವ ಯೋಜನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ತಿಳಿದು (ಪ್ರ.ವಾ., ಒಳನೋಟ, ಡಿ. 20) ಮನಸ್ಸಿಗೆ ನೋವಾಯಿತು. ಚೋಮನಂತಹವರು ಸ್ವಾತಂತ್ರ್ಯಾನಂತರ ಆಶ್ವಾಸನೆಗಳನ್ನು ನಂಬುತ್ತಾ ಬರೀ ಕನಸು ಕಾಣುತ್ತಾ ಕೈ ಕಟ್ಟಿ ಜಡವಾಗಿ ಕುಳಿತಿದ್ದಾರೆ. ಯಾವ ಸವಲತ್ತುಗಳೂ ಅವರ ಗುಡಿಸಿಲಿನೊಳಗೆ ಅಡಿಯಿಟ್ಟಿಲ್ಲ. ಎಲ್ಲವೂ ಉಳ್ಳವರು ಹಾಗೂ ಓಲೈಸುವವರ ಪಾಲು.
ಕಾರಂತರ ‘ಚೋಮನ ದುಡಿ’ಯ ಚೋಮನ ಬಾಳೂ ಇದಕ್ಕಿಂತ ಹೊರತಲ್ಲ! ಅದಕ್ಕಾಗಿಯೇ ಕಾದಂಬರಿಯ ಕೊನೆಗೆ ‘ಎತ್ತಿದ ಕೈ ಹಾಗೂ ಹಿಡಿದ ದುಡಿ ಹಾಗೆಯೇ ಇತ್ತು; ಆದರೆ ಚೋಮನಿಲ್ಲ’ ಎಂಬ ಸಾಲು ದಲಿತರ ಸಮಸ್ಯೆಗೆ ಹಿಡಿದ ಕೈಗನ್ನಡಿಯೇ ಸರಿ. ಹೌದು, ಇಂತಹ ಸಮಸ್ಯೆಗಳಿಗೆ ಕೊನೆಯೆಂದು? ಬೆಕ್ಕಿಗೆ ಗಂಟೆ ಕಟ್ಟಬಲ್ಲ ಎಂಟೆದೆಯ ಬಂಟ ಬರಬಹುದೇ?
-ಕುಮಾರ ಚಲವಾದಿ, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.