ವಿವಿಧ ರಾಜಕೀಯ ಸ್ಥಾನಮಾನಗಳಿಗೆ ಯೋಗ್ಯ ವ್ಯಕ್ತಿಗಳನ್ನು ನೇಮಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಮನ್ವಂತರವೊಂದು ನಿಜವಾಗಲೂ ಆರಂಭವಾಗಿರುವ ಹೊತ್ತಿನಲ್ಲಿಯೇ ಮತ್ತೆ ಕೆಲವು ನಾಮನಿರ್ದೇಶನಗಳು ಪಕ್ಷದ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಿವೆ. ಶಾಂತಾರಾಮ ಸಿದ್ದಿ, ಸಾಬಣ್ಣ ತಳವಾರ, ಈರಣ್ಣ ಕಡಾಡಿ, ಅಶೋಕ ಗಸ್ತಿಯಂಥವರ ಆಯ್ಕೆಯು ಪಕ್ಷವು ನಿಜವಾಗಲೂ ರಾಜಕಾರಣವನ್ನು ಹೊಸ ದಿಗಂತದೆಡೆಗೆ ಕೊಂಡೊಯ್ಯುತ್ತಿದೆ ಎನ್ನುವಾಗಲೇ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಅಂಥವರ ನಾಮನಿರ್ದೇಶನವು ಅಂತಹ ಭರವಸೆಯನ್ನು ಹುಸಿಗೊಳಿಸುತ್ತಿದೆ.
ಸಾಹಿತ್ಯ ಕ್ಷೇತ್ರದ ಕೋಟಾದಡಿ ವಿಶ್ವನಾಥ್ ಅವರ ನೇಮಕ ಅಸಮರ್ಪಕವಾದುದು. ಕನ್ನಡ ಭಾಷೆ ಮತ್ತು ಸಾಹಿತ್ಯ ಸೃಷ್ಟಿಯಲ್ಲಿ ನಿರತರಾಗಿರುವ ನಾಡಿನ ಹಲವು ಬರಹಗಾರರು, ವಿದ್ವಜ್ಜನರು ಯಾವುದೇ ಫಲಾಪೇಕ್ಷೆ ಇಲ್ಲದೆ ಜ್ಞಾನಪ್ರಸಾರದಲ್ಲಿ ನಿರತರಾಗಿದ್ದಾರೆ. ಇಂತಹ ಅಕ್ಷರ ಲೋಕದ ಪ್ರತಿನಿಧಿಯನ್ನು ಪಕ್ಷವು ಆಯ್ಕೆ ಮಾಡಿದ್ದರೆ ಸಹೃದಯರಿಗೊಂದು ಸೂಕ್ತ ಸಂದೇಶವಿರುತ್ತಿತ್ತು. ಆದರೆ ಈಗ ರಾಜಕಾರಣದಲ್ಲಿರುವ ಯಾರಾದರೂ ತನಗನಿಸಿದ್ದನ್ನು ತನ್ನದೇ ಮೂಗಿನ ನೇರಕ್ಕೆ ಏನಾದರೊಂದು ಬರೆದು ಪ್ರಕಟಿಸಿದರೆ, ಮುಂದೊಂದು ದಿನ ಚುನಾವಣೆಯಲ್ಲಿ ಸೋತಾಗ ನಿಗದಿತ ಕೋಟಾದಡಿ ಆಯ್ಕೆಗೆ ಅರ್ಹತೆಯ ಮಾನದಂಡವನ್ನಾಗಿಸುವ ನಡೆಗೆ ಮುನ್ನುಡಿ ಬರೆದಂತಾಗಿದೆ.
-ಎಂ.ಎಸ್.ಸಿದ್ಧಾರ್ಥ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.