ADVERTISEMENT

ವಾಚಕರ ವಾಣಿ: ಬರಲು ಸಿದ್ಧರಾದವರಿಗೆ ಬಲೆ ಹಾಕುವುದೇಕೆ?

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 20:26 IST
Last Updated 23 ಸೆಪ್ಟೆಂಬರ್ 2021, 20:26 IST

‘ಕಾಂಗ್ರೆಸ್ ಪಕ್ಷದ ಇಪ್ಪತ್ತು ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದು ಅವರನ್ನು ಬಲೆ ಹಾಕಿ ಸೆಳೆಯುವ ಕೆಲಸವನ್ನು ಸಚಿವ ಮುನಿರತ್ನ ಅವರಿಗೆ ವಹಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಶಾಸಕರೇ ಬರಲು ಸಿದ್ಧರಾಗಿರುವಾಗ ಬಲೆ ಹಾಕಿ ಸೆಳೆಯುವ ಅಗತ್ಯ ಏನಿದೆ? ಒಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಈ ರೀತಿ ಮಾತನಾಡುವುದು ಅಥವಾ ಬಯಸುವುದು ಸರಿಯಲ್ಲ. ಯಾವುದೇ ವ್ಯಕ್ತಿ ಆ ಪಕ್ಷದ ಸಿದ್ಧಾಂತದ ಮೇಲೆ ಒಲವಿಟ್ಟು ಸೇರಬೇಕೇ ಹೊರತು ಅಧಿಕಾರದ ಹಂಬಲದಿಂದ ಅಲ್ಲ. ಕೇವಲ ಅಧಿಕಾರ ಸಿಗುತ್ತದೆ ಎಂಬ ಸ್ವಾರ್ಥದಿಂದ ಸೇರ್ಪಡೆಗೊಂಡರೆ ಅಂತಹವರು ನಿಜವಾಗಿಯೂ ಜನರ ಸೇವೆ ಮಾಡುತ್ತಾರೆಯೇ?

ಪಕ್ಷಾಂತರಗೊಂಡವರಿಗೆ ಪಕ್ಷಾಂತರಗೊಂಡ ಐದು ವರ್ಷಗಳ ನಂತರವಷ್ಟೇ ಅಧಿಕಾರ ದೊರಕುವಂತೆ ಕಾನೂನು ರೂಪಿಸಲಿ. ಐದು ವರ್ಷಗಳು ಪಕ್ಷದ ಸಿದ್ಧಾಂತ ಮತ್ತು ನಿಲುವಿಗೆ ಬದ್ಧರಾಗಿ ದುಡಿದ ನಂತರ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಲಿ. ಪಕ್ಷಾಂತರ ತಡೆಗೆ ಒಂದು ಬಲವಾದ ಕಾನೂನು ತರದಿದ್ದರೆ ‘ಆಪರೇಷನ್ ಕಮಲ’, ‘ಆಪರೇಷನ್ ಹಸ್ತ’ದಂತಹ ಅನಿಷ್ಟ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ.
-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT