ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಮಾಜಿ ಸೈನಿಕರೊಬ್ಬರು ಪತ್ನಿ ಕೋವಿಡ್ನಿಂದ ಮೃತಪಟ್ಟ ದುಃಖವನ್ನು ತಾಳಲಾರದೆ ತಮ್ಮ ನಾಲ್ವರು ಮಕ್ಕಳಿಗೆ ವಿಷ ಉಣಿಸಿ, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ಪ್ರ.ವಾ., ಅ. 24). ಗಂಡ ಕೋವಿಡ್ನಿಂದ ಮೃತಪಟ್ಟಿದ್ದರಿಂದ ಮನನೊಂದ ಗೃಹಿಣಿಯೊಬ್ಬರು ತಮ್ಮ ಹದಿಹರೆಯದ ಮಗ ಮತ್ತು ಪುಟ್ಟ ಮಗಳೊಂದಿಗೆ ಸಾವಿಗೆ ಶರಣಾಗಿದ್ದುದು ಕೆಲ ದಿನಗಳ ಹಿಂದೆ ವರದಿಯಾಗಿತ್ತು.
ಬುದ್ಧನ ಕಾಲದಿಂದಲೂ ಮನುಷ್ಯ ಸಾವಿಲ್ಲದ ಮನೆಯ ಸಾಸಿವೆಗಾಗಿ ಹುಡುಕುತ್ತಲೇ ಇದ್ದಾನೆ. ಕೋವಿಡ್ನಿಂದ ಸಾವು, ನೋವಿನಿಂದ ನರಳುತ್ತಿರುವ ಸಾವಿರಾರು ಕುಟುಂಬಗಳನ್ನು ಕಾಣುತ್ತಿದ್ದೇವೆ. ವಾಸ್ತವ ಹೀಗಿರುವಾಗ, ಮನೆಯಲ್ಲಿ ಒಂದು ಸಾವು ಸಂಭವಿಸಿದರೆ, ಅದಕ್ಕೆ ಇನ್ನಷ್ಟು ಸಾವುಗಳನ್ನು ಸೇರಿಸುವುದರಲ್ಲಿ ಅರ್ಥವಿಲ್ಲ.
ಮಕ್ಕಳ ಮೇಲೆ ತಮಗೆ ಸಂಪೂರ್ಣ ಹಕ್ಕಿದೆ, ಅವರನ್ನು ಏನು ಬೇಕಾದರೂ ಮಾಡಬಹುದು ಎಂದು ತಂದೆ-ತಾಯಿ ತಪ್ಪಾಗಿ ತಿಳಿದಿರುವುದೇ ಇಂಥ ದುರಂತಗಳಿಗೆ ಕಾರಣ. ಮಕ್ಕಳು ಸಮಾಜದ ಆಸ್ತಿ. ಅವರನ್ನು ಸತ್ಪ್ರಜೆಗಳನ್ನಾಗಿ ಬೆಳೆಸುವುದು ಹಾಗೂ ಅವರು ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಬೇಕಾದ ಸೌಕರ್ಯಗಳನ್ನು ಒದಗಿಸುವುದು ತಂದೆ ತಾಯಿಯ ಆದ್ಯ ಕರ್ತವ್ಯ. ಅದನ್ನು ನಿರ್ವಹಿಸದೆ, ಯಾವುದೇ ಅಪರಾಧ ಮಾಡಿರದ ಆ ಕಂದಮ್ಮಗಳನ್ನು ಸಾಯಿಸುವುದು ಅಕ್ಷಮ್ಯ ಅಪರಾಧ, ಕ್ರೌರ್ಯದ ಪರಮಾವಧಿ.
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.