ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬೀದಿಗಳಲ್ಲಿ ಮೆರವಣಿಗೆ ಮಾಡಿದ ಸುದ್ದಿ (ಪ್ರ.ವಾ., ಜ. 27) ಓದಿ ನಿಬ್ಬೆರಗಾದೆ. ಯಾಕೆಂದರೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಂಬುದೇ ಒಂದು ದೊಡ್ಡ ಪಾತಕ ಕೃತ್ಯವಾಗಿರುವಾಗ ಇಲ್ಲಿ ಅತ್ಯಾಚಾರವನ್ನು ಎಸಗಿರುವುದಲ್ಲದೆ ಸಂತ್ರಸ್ತೆಯ ಕೂದಲನ್ನು ಕತ್ತರಿಸಿ, ಮುಖಕ್ಕೆ ಕಪ್ಪು ಬಣ್ಣ ಬಳಿದು, ಶೂಗಳ ಹಾರ ಹಾಕಿ ಮೆರವಣಿಗೆ ಮಾಡುವಷ್ಟು ನಮ್ಮ ಸಮಾಜ ಹಾಳಾಯಿತೇ? ಅತ್ಯಾಚಾರಿಗಳಿಗೆ ಇಷ್ಟೊಂದು ಧೈರ್ಯ ಬಂದದ್ದಾದರೂ ಹೇಗೆ?
ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಒಂದು ಚಿಕ್ಕ ಹಳ್ಳಿಯಲ್ಲಿ ನಡೆಯುವ ಸಣ್ಣ ಘಟನೆಯೂ ದೇಶದ ರಾಜಧಾನಿಯವರೆಗೆ ತಲುಪಿ ದೊಡ್ಡ ಚರ್ಚೆಗೆ ಕಾರಣವಾಗಿ, ಪ್ರಧಾನಿ, ರಾಷ್ಟ್ರಪತಿ ಸಹ ಪ್ರತಿಕ್ರಿಯಿಸುವಂತಹ ಸಂದರ್ಭ ಇದೆ. ಹೀಗಿರುವಾಗ, ರಾಷ್ಟ್ರ ರಾಜಧಾನಿಯಲ್ಲೇ ನಡೆದ ಇಂತಹ ಘೋರ ಪ್ರಕರಣ ಆಶ್ಚರ್ಯಕರ. ನ್ಯಾಯಾಲಯಗಳು ಇಂತಹ ವಿಷಯಗಳಲ್ಲಾದರೂ ಆದಷ್ಟು ಬೇಗ ತೀರ್ಪು ನೀಡಬೇಕು. ವರ್ಷಗಳ ನಂತರ ತೀರ್ಪು ಹೊರಬರುವುದರಿಂದ ಅಪರಾಧಿಗಳಿಗೆ ಭಯವಿಲ್ಲದಂತೆ ಆಗುತ್ತದೆ.
- ಮೋನಿಕ ಆರ್.,ಚಿಕ್ಕಗೊಂಡನಹಳ್ಳಿ, ಚಿತ್ರದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.