ಕೋವಿಡ್ ಲಸಿಕೆ ಪ್ರಯೋಗದ ಮತ್ತೊಂದು ಹಂತ ಆರಂಭವಾಗಿದೆ. ಲಸಿಕೆ ಯಾವಾಗ ಬಂದೀತು ಎಂದು ಆಸಕ್ತಿಯಿಂದ ಕಾದಿದ್ದ ಕೋವಿಡ್ ಯೋಧರೂ ಅದನ್ನು ಹಾಕಲು ಆರಂಭಿಸಿದಾಗ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದುಮುಂದು ನೋಡಿದ್ದು ಒಂದು ವಿಪರ್ಯಾಸ. ಈಗ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಲಸಿಕೆ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸಲು ಪ್ರಧಾನಿ ಮೊದಲುಗೊಂಡು ಅನೇಕ ಗಣ್ಯರು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ಇದರಿಂದ, ಲಸಿಕೆ ಕುರಿತು ಜನರಲ್ಲಿ ವಿಶ್ವಾಸ ವೃದ್ಧಿಸಬಹುದು.
ಇದುವರೆಗೂ ಸುಮಾರು ಒಂದೂವರೆ ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿರುವುದರಿಂದ ಅದನ್ನು ತೆಗೆದುಕೊಂಡವರ ಆರೋಗ್ಯದ ಕುರಿತು ರಾಜ್ಯವಾರು ಮಾಹಿತಿ ಪ್ರಕಟಿಸಿದರೆ ಅದು ಖಂಡಿತ ಜನರಿಗೆ ವ್ಯಾಕ್ಸಿನ್ ಪರಿಣಾಮದ ಬಗ್ಗೆ ಸ್ಪಷ್ಟ ಚಿತ್ರಣ ನೀಡಬಹುದು. ಆತಂಕ ನಿವಾರಣೆಯಾದರೆ ಜನ ತಾವಾಗಿಯೇ ಲಸಿಕೆ ಪಡೆಯಲು ಮುಂದಾಗುತ್ತಾರೆ. ಆಗ,ವ್ಯಾಕ್ಸಿನ್ಗಾಗಿ ನೂಕುನುಗ್ಗಲು ಉಂಟಾಗಬಹುದು. ಪರಿಣಾಮವಾಗಿ, ಅವ್ಯವಸ್ಥೆ ಮತ್ತು ಕೃತಕ ಅಭಾವ, ಕಾಳಸಂತೆ ಎಲ್ಲವೂ ತಲೆ ಎತ್ತಬಹುದು. ಸರ್ಕಾರ ಇದರ ಬಗ್ಗೆಯೂ ಈಗಲೇ ಯೋಚಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಸತ್ಯಬೋಧ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.