ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 21 ಮೇ 2025, 19:30 IST
Last Updated 21 ಮೇ 2025, 19:30 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಮಹಿಳೆಯರ ಬರಹದ ಶಕ್ತಿ ತೋರಿಸಿದ್ದಾರೆ

ನಾನು ಮೂರು ಭಾಷೆಗಳಲ್ಲಿನ ಸಾಹಿತ್ಯವನ್ನು ಓದುತ್ತೇನೆ. ಕನ್ನಡ, ಹಿಂದಿ ಮತ್ತು ಉರ್ದು. ಈ ಮೂರು ಭಾಷೆಗಳಲ್ಲಿ ಅತಿ ಹೆಚ್ಚಾಗಿ ಓದುವುದು ಮಹಿಳೆಯರು ರಚಿಸುವ ಸಾಹಿತ್ಯವನ್ನು. ಅಡುಗೆಮನೆ ಸಾಹಿತ್ಯ ಎನ್ನುವ ಪದ ಕಣ್ಣಿಗೆ ಬಿದ್ದಿದ್ದು ಕನ್ನಡದಲ್ಲಿ ಮಾತ್ರ. ಹಿಂದಿಯಲ್ಲಾಗಲೀ ಉರ್ದುವಿನಲ್ಲಾಗಲೀ ‘ಬಾವರ್ಚಿ ಖಾನೆ ಕ ಸಾಹಿತ್ಯ’ ಅಥವಾ ‘ಬಾವರ್ಚಿ ಖಾನೆ ಕ ಅದಬ್’ ಎಂದು ಓದಿರಲಿಲ್ಲ.

ADVERTISEMENT

ಎರಡು ವರ್ಷಗಳ ಹಿಂದೆ ಹಿಂದಿಯ ಗೀತಾಂಜಲಿ ಶ್ರೀ ಅವರಿಗೆ ಬೂಕರ್ ಪ್ರಶಸ್ತಿ ಬಂದಾಗ ಕೆಲವು ವಿಮರ್ಶಕರು, ಗೀತಾಂಜಲಿ ಶ್ರೀ ಯಾರು ಎಂದು ಕೇಳಿದರಂತೆ. ಈಗ ಬಾನು ದೀದಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ಮಹಿಳೆಯರು ರಚಿಸುವ ಸಾಹಿತ್ಯಕ್ಕೆ ಎಂಥ ಶಕ್ತಿಯಿದೆ ಎಂಬುದನ್ನು ತೋರಿಸಿದ್ದಾರೆ.

– ಅದೀಬ್ ಅಖ್ತರ್, ಬನ್ನೂರು

***

ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ

ದೇಶದ ವಿವಿಧ ನ್ಯಾಯಾಲಯಗಳಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕ ಹೊಂದಲು ಅಭ್ಯರ್ಥಿಗಳು ವಕೀಲರಾಗಿ ಕಡೆಯಪಕ್ಷ ಮೂರು ವರ್ಷ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ. ಇದು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಸದೃಢಗೊಳಿಸುವ ಮತ್ತೊಂದು ಪ್ರಯತ್ನ. ಮೂರು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕೆಂಬ ನಿಯಮವು 2002ರವರೆಗೂ ಜಾರಿಯಲ್ಲಿತ್ತಾದರೂ ನಂತರ ಆ ನಿಯಮವನ್ನು ತೆಗೆಯಲಾಯಿತು.

ನ್ಯಾಯಾಧೀಶರ ಹುದ್ದೆಯು ಉನ್ನತವಾದುದು ಹಾಗೂ ಪವಿತ್ರವಾದುದು. ಇಂತಹ ಹುದ್ದೆಗೆ ಬರುವವರು ನ್ಯಾಯಾಲಯದ ರೀತಿ ರಿವಾಜುಗಳನ್ನು ತಿಳಿದಿರಬೇಕು. ಜೊತೆಗೆ, ಕಾನೂನುಗಳನ್ನು ಅನ್ವಯ ಮಾಡುವ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕು. ಗ್ರಂಥಗಳಲ್ಲಿ ಏನೇ ಓದಿಕೊಂಡಿದ್ದರೂ ವಕೀಲರಾಗಿ ನ್ಯಾಯಾಲಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳದ ಹೊರತು, ಅವರಿಗೆ ನ್ಯಾಯಾಂಗದ ಬಗ್ಗೆ ಹೆಚ್ಚಿನ ತಿಳಿವಳಿಕೆ ಸಿಗುವುದು ಕಷ್ಟವಾಗಬಹುದು.

– ಕೆ.ವಿ. ವಾಸು, ಮೈಸೂರು

***

ಬಾನುಗೆ ಪ್ರಶಸ್ತಿ ಸಂತಸ ನೀಡಿತು

ಲೇಖಕಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದನ್ನು ಬುಧವಾರ ಬೆಳಗಿನ ಜಾವದಲ್ಲಿ ತಿಳಿದು ಸಂತಸವಾಯಿತು. ಅವರ ಸ್ವೀಕಾರ ಭಾಷಣವನ್ನೂ ಕೇಳಿದೆ. ‘ಕನ್ನಡದಲ್ಲಿ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾಗುವ ಗುಣಮಟ್ಟದ ಕೃತಿಗಳು, ಬರಹಗಾರರು ಇದ್ದಾರೆ. ಆದರೆ ಅಂತಹ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಕೆಲಸ ನಡೆದಿಲ್ಲ’ ಎಂಬುದು ಹಳೆಯ ಮಾತು.

ಚಲನಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ದೊರೆಯಲು ಒಂದು ಅಭಿಯಾನ ನಡೆಯುತ್ತದೆ. ಸಾಹಿತ್ಯ ಕೃತಿಗೆ ನೊಬೆಲ್‌ ಬರಲು ಹಲವೆಡೆ ‘ಪ್ರಸಿದ್ಧ’ ಆಗಿರಬೇಕಾಗುತ್ತದೆ. ಈಗ‌ ಈ ಪ್ರಶಸ್ತಿ ವಿಜೇತ ಕೃತಿಯು ಬೇರೆ ಭಾರತೀಯ ಭಾಷೆಗಳಿಗೂ ಅನುವಾದವಾಗಲಿ. ಅದರಿಂದ ಕನ್ನಡದ ಮಹತ್ವ ಇತರ ಭಾಷಿಕರಿಗೂ ತಿಳಿಯುತ್ತದೆ. ಬಾನು ಅವರನ್ನು ಮುಸ್ಲಿಂ ಲೇಖಕಿ ಎಂದು ವರ್ಗೀಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಅವರು ಮಾನವ ಸಂಕಷ್ಟ, ಸಂವೇದನೆಗಳಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟಿದ್ದಾರೆ ಎಂಬುದು ನನ್ನ ಗ್ರಹಿಕೆ.

– ಎಚ್.ಎಸ್.ಮಂಜುನಾಥ, ಗೌರಿಬಿದನೂರು

***

ಒಂದಾಗಿ ಬಾಳಿದರೆ ಮಾತ್ರ ಪ್ರಗತಿ

ಹಾರೋಹಳ್ಳಿ ಗ್ರಾಮದ ಹಬ್ಬದಲ್ಲಿ ಭಾಗವಹಿಸಲು ಅವಕಾಶ ನೀಡದಿರುವ ಕ್ರಮವನ್ನು ಪ್ರಶ್ನಿಸಿದ್ದಕ್ಕೆ ಪರಿಶಿಷ್ಟ ಜಾತಿಯವರಿಗೆ ಬಹಿಷ್ಕಾರ ಹಾಕಿರುವುದು ವರದಿಯಾಗಿದೆ (ಪ್ರ.ವಾ., ಮೇ 21). ನಾವು ಈಚೆಗಷ್ಟೇ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಆಚರಿಸಿದ್ದೇವೆ. ಅವರು ಬೋಧಿಸಿದ ಸೌಹಾರ್ದ ಮತ್ತು ಸಹಬಾಳ್ವೆಯ ಪಾಠವನ್ನು ಕೊಂಡಾಡಿದ್ದೇವೆ. ಯಾವುದೇ ಊರಿನ ಹಬ್ಬ– ಹರಿದಿನಗಳನ್ನು ಜಾತಿ ಭೇದಭಾವ ಮಾಡದೆ, ಮನುಷ್ಯರೆಲ್ಲರೂ ಒಂದಾಗಿ ಒಗ್ಗೂಡಿ ಆಚರಿಸುವುದರಿಂದ ಮಾತ್ರ ಸಾಮಾಜಿಕ ಸಾಮರಸ್ಯ ಕಾಪಾಡಲು ಸಾದ್ಯ. ಅಂತಹ ಸಾಮರಸ್ಯ ಮತ್ತು ಸೌಹಾರ್ದ ಭಾವದಿಂದ ಮಾತ್ರ ಹಬ್ಬ ಹರಿದಿನಗಳ ಸೌಂದರ್ಯವೂ ಹೆಚ್ಚುತ್ತದೆ ಎಂಬುದನ್ನು ನಾವೆಲ್ಲ ಮನಗಾಣಬೇಕು. ಅಂತಹ ನಡೆ–ನುಡಿಯಿಂದ ಮಾತ್ರವೇ ನಮ್ಮ ದೇಶದ ಪ್ರಗತಿ ಸಾಧ್ಯ.

– ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

***

ಕನ್ನಡ ಕಲಿಯದಿದ್ದರೆ ದಂಡ ವಿಧಿಸಿ

ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕಿನ ಶಾಖೆಯೊಂದರಲ್ಲಿ ಸಿಬ್ಬಂದಿಯೊಬ್ಬರು ಗ್ರಾಹಕರ ಜೊತೆ ಕನ್ನಡದಲ್ಲಿ ವ್ಯವಹರಿಸಲು ನಿರಾಕರಿಸಿದ ಪ್ರಸಂಗದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸ್ಪಂದಿಸಿದ್ದು ಅಭಿನಂದನೀಯ.

ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಕರ್ತವ್ಯದ ನಿಮಿತ್ತ ಬರುವ ಯಾವುದೇ ಸಿಬ್ಬಂದಿಯು ಗ್ರಾಹಕರ ಜೊತೆ ಕನ್ನಡದಲ್ಲಿಯೇ ವ್ಯವಹರಿಸಬೇಕಿರುವುದು ಅಪೇಕ್ಷಣೀಯ. ಅಂಥವರು ಕರ್ನಾಟಕಕ್ಕೆ ಬಂದ ಆರು ತಿಂಗಳಲ್ಲಿ ಕನ್ನಡದಲ್ಲಿ ಮಾತನಾಡಲು ಹಾಗೂ ಒಂದು ವರ್ಷದ ಒಳಗೆ ಅವರ ಕೆಲಸಕ್ಕೆ ಅಗತ್ಯವಿರುವ ಮಟ್ಟಿಗೆ ಕನ್ನಡದಲ್ಲಿ ಓದಲು, ಬರೆಯಲು ಕಲಿತುಕೊಳ್ಳಬೇಕು ಎಂಬ ನಿಯಮವನ್ನು ಸರ್ಕಾರವೇ ರೂಪಿಸಿದರೆ ಸೂಕ್ತವಾಗುತ್ತದೆ. ಕನ್ನಡದ ಬಗ್ಗೆ ಹಗುರವಾಗಿ ನಡೆದುಕೊಂಡವರ ಸೂಕ್ತ ವಿಚಾರಣೆ ನಡೆಸಿ ಅವರಿಗೆ ದಂಡ ವಿಧಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರವು ಜಾರಿಗೆ ತರಬೇಕು.

– ಆರ್.ಟಿ.ಶರಣ್, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.