ADVERTISEMENT

ಸಾಲಮನ್ನಾ ಪರಿಹಾರವೇ?

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 17:03 IST
Last Updated 4 ಜುಲೈ 2018, 17:03 IST

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಅನೇಕ ಭಿನ್ನಾಭಿಪ್ರಾಯಗಳ ನಡುವೆ ಸಂಪುಟದ ರಚನೆಯೂ ಆಗಿದೆ. ಇಂದು ಬಜೆಟ್ ಮಂಡನೆ ಆಗಲಿದೆ. ರಾಜ್ಯದ ರೈತ ಆಶಾಭಾವದಿಂದ ಅಧಿವೇಶನದ ಕಡೆಗೆ ನೋಡುತ್ತಿದ್ದಾನೆ. ಪ್ರಣಾಳಿಕೆಯಲ್ಲಿರುವಂತೆ ಸಂಪೂರ್ಣ ಸಾಲಮನ್ನಾ ಮಾಡಬಹುದೆಂಬ ಭರವಸೆ ರೈತರಿಗಿದೆ. ಆದರೆ ಸಾರಾಸಗಟಾಗಿ ಸಾಲಮನ್ನಾ ಮಾಡುವುದು ಸರಿಯೇ ಎಂಬ ಪ್ರಶ್ನೆ ಕಾಡುತ್ತದೆ.

ಸಮರ್ಪಕವಾಗಿ ಬೆಳೆ ಬರದೆ ನಷ್ಟ ಅನುಭವಿಸಿದ ರೈತರ ಸಾಲವನ್ನು ಮಾತ್ರವೇ ಸರ್ಕಾರ ಮನ್ನಾ ಮಾಡಬೇಕು. ಸಾಲ ಮನ್ನಾ ಮಾಡುತ್ತಾರೆ ಎಂಬ ಆಸೆಯಿಂದಲೇ ಬೆಳೆಸಾಲ ಮಾಡಿ ಕಟ್ಟದಿರುವವರನ್ನೂ ನಾವು ಕಂಡಿದ್ದೇವೆ. ಕಟ್ಟುವ ಸಾಮರ್ಥ್ಯವಿದ್ದೂ ಕಟ್ಟದೇ ಇರುವುದು ಮೋಸ ಅಲ್ಲವೇ? ಇಂತಹ ಪ್ರವೃತ್ತಿಗೆ ತಡೆ ಹಾಕಬೇಕು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಾಲಮನ್ನಾ ವಿಷಯದ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಹಾಗಾದರೆ ನಮ್ಮನ್ನು ಕಾಡುತ್ತಿರುವ ಗಂಭೀರ ವಿಷಯ ಇದೊಂದೇ ಆಗಿದೆಯೇ?

ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಆದರೆ ಶಿಕ್ಷಣ ವಲಯದ ಸಮಸ್ಯೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೆಲವು ಸಚಿವರು ತಮ್ಮ ಖಾತೆಗಳ ಜವಾಬ್ದಾರಿ ಅರಿತುಕೊಳ್ಳುವುದರ ಬದಲು ತಮಗೆ ಸಲ್ಲಬೇಕಾದ ಸೌಲಭ್ಯಗಳ ಬಗ್ಗೆ ತಲೆಕೆಡಿಸಿಕೊಂಡಂತಿದೆ. ಸಮಸ್ಯೆಗಳ ಸರಮಾಲೆಯೇ ಇರುವಾಗ ಸ್ಪಂದಿಸಲು ಮಂತ್ರಿಗಳು ಹಿಂದೆಮುಂದೆ ನೋಡುವುದನ್ನು ಕಂಡರೆ ಭಯವಾಗುತ್ತದೆ. ಬಜೆಟ್ ಮಂಡನೆಯ ನಂತರವಾದರೂ ಸರ್ಕಾರ ಇತರೇ ಜನಪರ ಕಾರ್ಯಕ್ರಮದೆಡೆಗೆ ಲಕ್ಷ್ಯ ಕೊಡಬಹುದೇ?

ADVERTISEMENT


-ಗಂಗಾಧರ ಅಂಕೋಲೆಕರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.