ಆರು ರಾಜ್ಯಗಳ ಅಭಿವೃದ್ಧಿ ಮಾದರಿಯ ತಾಳೆ ಕುರಿತ ವರದಿಯಲ್ಲಿನ (ಪ್ರ.ವಾ., ಫೆ.16) ಮಾಹಿತಿಯನ್ನು ಪ್ರಸ್ತಾಪಿಸುತ್ತಾ ಟಿ.ಆರ್.ಚಂದ್ರಶೇಖರ ಅವರು ವಿವಿಧ ರಾಜ್ಯಗಳ ತಲಾ ವರಮಾನ, ಜಿಡಿಪಿಯನ್ನು ಹೋಲಿಸಿದ್ದಾರೆ (ವಾ.ವಾ., ಫೆ. 17). ಕರ್ನಾಟಕವು ಬೇರೆ ರಾಜ್ಯಗಳ ಮಾದರಿಯಿಂದ ಪಾಠ ಕಲಿಯಬೇಕು ಎಂದಿದ್ದಾರೆ. ಯಾವುದೇ ಪ್ರದೇಶದ ವಿವಿಧ ಅಭಿವೃದ್ಧಿ ಸೂಚಿಗಳನ್ನು ತುಲನೆ ಮಾಡುವಾಗ ಎರಡು ಅವಧಿಯ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾದುದು ಅತ್ಯಂತ ಅವಶ್ಯಕ.
ಒಂದು ಅವಧಿಯ ಅಂಕಿ ಅಂಶಗಳನ್ನಷ್ಟೇ ಇಟ್ಟುಕೊಂಡು ತುಲನೆ ಮಾಡುವುದರಿಂದ ಸರಿಯಾದ ಚಿತ್ರಣವನ್ನು ನೀಡಲು ಸಾಧ್ಯವಿಲ್ಲ. ಉದಾಹರಣೆಗೆ, ಸಾಕ್ಷರತೆ ಕುರಿತಂತೆ ಯಾವುದೇ ರಾಜ್ಯದ ಪ್ರಮಾಣ ಹಿಂದಿನ ಅವಧಿಯಲ್ಲಿ ಶೇ 90ರಷ್ಟು ಇದ್ದು ಈಗ ಶೇ 94 ಆಗಿದ್ದಲ್ಲಿ ಶೇ 4 ಪ್ರಗತಿಯಾಗಿದೆ ಎನ್ನಬಹುದು. ಅದೇ ಇನ್ನೊಂದು ರಾಜ್ಯದ ಪ್ರಮಾಣ ಹಿಂದಿನ ಅವಧಿಯಲ್ಲಿ ಶೇ 72 ಇದ್ದು ಈಗ ಶೇ 81 ಆಗಿದ್ದಲ್ಲಿ ಶೇ 9 ಪ್ರಗತಿಯಾಗಿರುತ್ತದೆ. ಅಂದರೆ ಸಾಕ್ಷರತೆ ಪ್ರಮಾಣ ಶೇ 9ರಷ್ಟು ಏರಿಕೆಯಾಗಿರುವ ರಾಜ್ಯವು ಹೆಚ್ಚು ಅಭಿವೃದ್ಧಿ ಕಡೆ ಸಾಗುತ್ತಿರುವುದನ್ನು ಕಾಣಬಹುದು. ಹೀಗಾಗಿ ಎರಡು ಅವಧಿಯ ಅಂಕಿ ಅಂಶಗಳನ್ನು ಪರಿಗಣಿಸಿ ವಿಶ್ಲೇಷಿಸಿ ತುಲನೆ ಮಾಡುವುದು ಸೂಕ್ತ. ಇಲ್ಲದಿದ್ದಲ್ಲಿ ಓದುಗರಿಗೆ ಪೂರ್ಣ ಚಿತ್ರಣ ಸಿಗದಂತಾಗುತ್ತದೆ.
- ಕೆ.ಪ್ರಭಾಕರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.