ಗೋವಾದಲ್ಲಿ ಕಾಂಗ್ರೆಸ್ನ ಎಂಟು ಶಾಸಕರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ನಲ್ಲಿ ಮೂವರು ಶಾಸಕರಷ್ಟೇ ಉಳಿದಿದ್ದು ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವನ್ನು ಕಳೆದುಕೊಳ್ಳಲಿದೆ ಎಂದು ವರದಿಯಾಗಿದೆ. ರಾಜ್ಯವೇ ಇರಲಿ ಅಥವಾ ಕೇಂದ್ರವೇ ಇರಲಿ ಅಲ್ಲೊಂದು ಸದೃಢ ವಿರೋಧ ಪಕ್ಷ ಇರಬೇಕು. ಅದು, ಆಡಳಿತ ಪಕ್ಷದ ನೆರಳಿನಂತೆ ಇರುತ್ತದೆ ಮತ್ತು ಆಡಳಿತ ಪಕ್ಷ ತಪ್ಪು ಹೆಜ್ಜೆ ಇಟ್ಟಾಗ ಸರಿದಾರಿಗೆ ತರಲು ಚಾಟಿ ಬೀಸುವ ಕೆಲಸ ಮಾಡುತ್ತದೆ. ಜೊತೆಗೆ ಜನರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸುತ್ತದೆ. ವಿರೋಧ ಪಕ್ಷ ಎಂಬುದೇ ಇಲ್ಲವಾದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ.
ವಿರೋಧಪಕ್ಷವೇ ಇಲ್ಲದಿದ್ದರೆ ಆಡಳಿತ ಪಕ್ಷವು ಸರ್ವಾಧಿಕಾರಿ ಧೋರಣೆಯನ್ನು ಮೈಗೂಡಿಸಿಕೊಳ್ಳುವ ಅಪಾಯ ಇರುತ್ತದೆ. ತಾನು ಆಡಿದ್ದೇ ಆಟ, ನಡೆದಿದ್ದೇ ದಾರಿ ಎಂಬಂತೆ ವರ್ತಿಸಬಹುದು. ಯಾವುದೋ ಆಮಿಷಗಳಿಗೆ, ಹುನ್ನಾರಗಳಿಗೆ ಬಲಿಯಾಗಿ ವಿರೋಧ ಪಕ್ಷಗಳ ಸದಸ್ಯರು ಆಡಳಿತ ಪಕ್ಷಕ್ಕೆ ಸೇರುವ ನಡೆಯನ್ನು ನಿಯಂತ್ರಿಸುವ ಮಾರ್ಗೋಪಾಯಗಳ ಬಗೆಗೆ ಗಂಭೀರವಾಗಿ ಚರ್ಚಿಸಲು ಇದು ಸಕಾಲ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಸಂಕಷ್ಟ ಎದುರಾಗಬಹುದು.
-ಪತ್ತಂಗಿ ಎಸ್. ಮುರಳಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.