ADVERTISEMENT

ವಾಚಕರ ವಾಣಿ | ಅಧಿಕಾರಿಗಳ ಮರುನಿಯೋಜನೆ ಮಾಡಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST

ನಾನು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದಾಗ, ನಾನು ಮತ್ತು ನನ್ನ ಸ್ನೇಹಿತರು ಅಲ್ಲಿನ ಕರ್ನಾಟಕ ಭವನದ ಅಧಿಕಾರಿಗಳ ಕಾರ್ಯವೈಖರಿಯನ್ನು ಗಮನಿಸಿದೆವು. ಅಲ್ಲೀಗ ನಾಲ್ವರು ಐಎಎಸ್‌ ಅಧಿಕಾರಿಗಳು, ನಾಲ್ವರು ಕೆಎಎಸ್‌ ಅಧಿಕಾರಿಗಳು, ಸುಮಾರು 10 ಮಂದಿ ವ್ಯವಸ್ಥಾಪಕರು ಹಾಗೂ ಇತರ ಕೆಲವು ಅಧಿಕಾರಿಗಳು ಇದ್ದಾರೆ.ಕೋವಿಡ್‌– 19 ಕಾರಣದಿಂದ ಕರ್ನಾಟಕ ಭವನದಲ್ಲಿ ಈಗ ಯಾವುದೇ ಅತಿಥಿಗಳಿಲ್ಲ ಮತ್ತು ಮುಂದಿನ ಆರು ತಿಂಗಳ ಕಾಲ ಅತಿಥಿಗಳು ಭೇಟಿ ನೀಡುವ ಸಾಧ್ಯತೆಯೂ ಕಡಿಮೆ.

ರಾಜ್ಯವು ಅದರಲ್ಲೂ ಬೆಂಗಳೂರು ನಗರವು ಅಧಿಕಾರಿಗಳ ತೀವ್ರ ಕೊರತೆ ಎದುರಿಸುತ್ತಿದೆ. ನಗರದಲ್ಲಿ ಕೆಲಸ ಮಾಡುತ್ತಿರುವ 55 ವರ್ಷಕ್ಕಿಂತ ಕೆಳಗಿನ ಎಲ್ಲ ಸಿಬ್ಬಂದಿಯನ್ನೂ ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಿರುವಾಗ, ಸರ್ಕಾರವು ಅಷ್ಟೊಂದು ಅಧಿಕಾರಿಗಳನ್ನು ಕರ್ನಾಟಕ ಭವನಕ್ಕೆ ನಿಯೋಜಿಸಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ.

ಮತ್ತೊಂದು ಮುಖ್ಯವಾದ ವಿಷಯವೆಂದರೆ, ಕರ್ನಾಟಕ ಭವನದಲ್ಲಿ ಇಬ್ಬರು ಸ್ಥಾನಿಕ ವೈದ್ಯರಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ವೈದ್ಯರ ತೀವ್ರ ಕೊರತೆ ಇರುವುದರಿಂದ, ಅವರನ್ನು ಇಲ್ಲಿಗೆ ಕರೆಸಿಕೊಂಡು, ಸೋಂಕು ಕಡಿಮೆಯಾದ ಬಳಿಕ ಕರ್ನಾಟಕ ಭವನಕ್ಕೆ ಮರುನಿಯೋಜನೆ ಮಾಡಬಹುದು. ರಾಜ್ಯದ ಹಿತದೃಷ್ಟಿಯಿಂದ ಸರ್ಕಾರವು ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.

ADVERTISEMENT

-ಬಸವರಾಜು ಟಿ.ಡಿ., ತಗ್ಗಹಳ್ಳಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.