ADVERTISEMENT

ವಾಚಕರವಾಣಿ: ರಸ್ತೆ ಅಗೆಯದೆ ಪುನರ್‌ನಿರ್ಮಾಣ ಸರಿಯೇ?

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 19:30 IST
Last Updated 10 ಜನವರಿ 2022, 19:30 IST

ಇತ್ತೀಚಿನ ದಿನಗಳಲ್ಲಿ ಹಳ್ಳಿ, ನಗರಗಳೆನ್ನದೆ ರಸ್ತೆ ದುರಸ್ತಿ ಕಾರ್ಯ ಸರ್ವೇಸಾಮಾನ್ಯ ಎಂಬಂತೆ ನಡೆಯುತ್ತಲೇ ಇರುತ್ತದೆ. ಇದೆಲ್ಲ ಜನರ ಅನುಕೂಲಕ್ಕಾಗಿ ಎಂಬುದೇನೋ ಸರಿ. ಆದರೆ ಗುತ್ತಿಗೆದಾರರು ಹಳೆಯ ರಸ್ತೆಯನ್ನು ಅಗೆಯದೆ ಅದರ ಮೇಲೇ ಡಾಂಬರು/ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಿದರೆ ಅದು ಮೊದಲಿದ್ದ ರಸ್ತೆಗಿಂತ ಎತ್ತರವಾಗುತ್ತದೆ. ಪ್ರತಿಬಾರಿಯೂ ಹೀಗೆಯೇ ಎತ್ತರವಾಗುತ್ತಾ ಹೋದರೆ ಅಕ್ಕಪಕ್ಕದ ಮನೆ, ಅಂಗಡಿಗಳ ಗತಿಯೇನು? ಎತ್ತರಗೊಳ್ಳುತ್ತಲೇ ಹೋಗುವ ಈ ರಸ್ತೆಯ ಸಲುವಾಗಿ ಅವರು ಪ್ರತಿಬಾರಿಯೂ ತಮ್ಮ ಕಟ್ಟಡಗಳನ್ನು ಕೆಡವಿ ಪುನರ್‌ನಿರ್ಮಾಣ ಮಾಡಲು ಸಾಧ್ಯವೇ? ಇದರಿಂದಾಗಿ ಎಷ್ಟೋ ಮನೆಗಳ ತ್ಯಾಜ್ಯಯುಕ್ತ ನೀರು ಚರಂಡಿ ಸೇರದೆ ಬಹಳ ಕಷ್ಟಕ್ಕೆ ಒಳಗಾದವರಿದ್ದಾರೆ. ಇನ್ನು ಮಳೆ ಬಂದರಂತೂ ಇವರ ಗತಿ ಕೇಳುವವರೇ ಇಲ್ಲ.

ಮೊದಲಿನ ರಸ್ತೆಯನ್ನು ಸಂಪೂರ್ಣ ತೆಗೆದುಹಾಕಿ, ಅದರಷ್ಟೇ ಎತ್ತರದಲ್ಲಿ ಪುನರ್‌ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಕಾರ್ಯಕ್ಕೆ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕು. ಗುತ್ತಿಗೆ ಕಾರ್ಯದಲ್ಲಿ ಅಡಿಯಿಂದ ಮುಡಿಯವರೆಗೆ ತಿನ್ನುವವರೇ ಇದ್ದಾರೆಂದು, ಒಂದು ರೂಪಾಯಿಯ ಕೆಲಸವನ್ನು ಎರಡು ರೂಪಾಯಿಗೆ ಸರ್ಕಾರವೇ ನಿಗದಿಪಡಿಸುತ್ತಿರುವಾಗ ಡಿಗ್ಗಿಂಗ್ ಕಾರ್ಯ ಸರಿಯಾದ ಕ್ರಮದಲ್ಲಿ ಆಗಬೇಕಲ್ಲವೇ? ಸಾರ್ವಜನಿಕರು ಸಹ ತಮ್ಮ ಮನೆಯ ಮುಂದೆ ಡಿಗ್ಗಿಂಗ್ ಕಾರ್ಯ ನಿರ್ವಹಿಸದೇ ಇದ್ದಲ್ಲಿ ತಕ್ಷಣವೇ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದು, ಈ ಕಾರ್ಯ ಆಗಲೇಬೇಕೆಂದು ಒತ್ತಾಯಿಸಬೇಕು. ಇಲಾಖೆಯ ಪಟ್ಟಭದ್ರ ಹಿತಾಸಕ್ತಿಗಳಿಂದ ತೊಂದರೆಯಾದರೆ ನ್ಯಾಯಾಂಗ ವ್ಯವಸ್ಥೆಯ ಸದುಪಯೋಗ ಪಡೆಯಬೇಕು.

- ಡಾ. ಜಗದೀಶ ನೂಲಿನವರ,ಯಾದಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.