ರಾಜ್ಯದಲ್ಲಿ ಇದೇ 16ರಿಂದ ಶಾಲೆಗಳು ಆರಂಭವಾಗಿರುವುದು ಸ್ವಾಗತಾರ್ಹ. ಆದರೆ ಎಲ್ಲಾ ವಿಷಯಗಳ ಪಠ್ಯಪುಸ್ತಕಗಳು ಮಕ್ಕಳ ಕೈಸೇರಲು ಇನ್ನೂ ಮೂರು ತಿಂಗಳು ಬೇಕಾಗುವ ಸಾಧ್ಯತೆಯಿದೆ. ಪುನರ್ಪರಿಷ್ಕರಣೆ ಮತ್ತು ಪುಸ್ತಕ ಮುದ್ರಣಕ್ಕೆ ಇರುವ ಕಾಗದದ ಕೊರತೆಯೇ ಈ ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ನಡುವೆ ಪಠ್ಯಪುಸ್ತಕಗಳಲ್ಲಿ ಕೆಲವು ಪಠ್ಯ, ಪಾಠಗಳನ್ನು ಕೈಬಿಟ್ಟಿರುವ ಬಗ್ಗೆ ತೀವ್ರ ಆಕ್ಷೇಪಗಳು ಕೇಳಿಬರುತ್ತಿವೆ. ಇದಕ್ಕೆ ಸಚಿವ ಬಿ.ಸಿ.ನಾಗೇಶ್ ಅವರು ‘ಪಠ್ಯಪುಸ್ತಕ ಮುದ್ರಣ ಆಗಿ ಬಂದ ಮೇಲೆ ನೋಡಿ ಹೇಳಿ, ಆಗ ಇಲ್ಲದಿದ್ದಾಗ ಕೇಳಿ... ಶಿಕ್ಷಣದಲ್ಲಿ ರಾಜಕೀಯಕರಣ ಮಾಡುವುದಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಪುಸ್ತಕದ್ದು ಎನ್ನಲಾದ ಪಿಡಿಎಫ್ ಅಧಿಕೃತವಲ್ಲ. ಮುದ್ರಿತ ಪಠ್ಯಪುಸ್ತಕ ಮಾತ್ರ ಅಧಿಕೃತ’ ಎಂದು ಹೇಳಿಕೆ ನೀಡಿದ್ದಾರೆ (ಪ್ರ.ವಾ., ಮೇ 19). ಪಠ್ಯಪುಸ್ತಕಗಳ ಪಿಡಿಎಫ್ಗಳು ಸಿದ್ಧವಾಗದೆ ಮುದ್ರಣಕ್ಕೆ ಹೇಗೆ ಹೋಗಲು ಸಾಧ್ಯ? ಅಲ್ಲದೆ, ಪಠ್ಯಪುಸ್ತಕಗಳು ಮುದ್ರಣಗೊಂಡು ಬಂದ ಮೇಲೆ ಪ್ರಮುಖ ಪಾಠ, ಪಠ್ಯಗಳು ಇಲ್ಲದಿದ್ದರೆ ಹೇಗೆ ಸೇರಿಸಲು ಸಾಧ್ಯ? ಒಟ್ಟಾರೆ, ಸಚಿವರ ಹೇಳಿಕೆಯು ಅಚ್ಚರಿ ಮೂಡಿಸಿದೆ.
ಆದ್ದರಿಂದ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ಈಗಾಗಲೇ ಶಾಲೆಗಳು ಪ್ರಾರಂಭವಾಗಿರುವುದರಿಂದ ತಾತ್ಕಾಲಿಕವಾಗಿ ಪಾಠಪ್ರವಚನಗಳಿಗೆ ತೊಂದರೆಯಾಗದಿರಲು ಎಲ್ಲಾ ತರಗತಿಗಳ ಪಠ್ಯಪುಸ್ತಕಗಳ ಪಿಡಿಎಫ್ಗಳನ್ನು ಸರ್ಕಾರ ‘ಕರ್ನಾಟಕ ಪಠ್ಯಪುಸ್ತಕ ಸಂಘ’ದ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವುದು ಒಳ್ಳೆಯದು.
–ಡಾ. ಶಿವಕುಮಾರಿ ಎಂ.ಎಸ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.