ಚಿತ್ರದುರ್ಗದಿಂದ ಹಿರಿಯೂರಿಗೆ ನಾನು ಇತ್ತೀಚೆಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಪ್ರವಾಸಿ ಮಂದಿರದ ಬಳಿ ಹೆಣ್ಣು ಮಗಳೊಬ್ಬಳು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಹತ್ತಿದರು. ಸೀಟು ಭರ್ತಿಯಾಗಿದ್ದು, ಕೊಡಿಸಿ ಕೊಡುವ ಭರವಸೆ ನೀಡಿದ ಕಂಡಕ್ಟರ್, ಸೀಟು ಕೊಡಿ ಎಂದು ಕೇಳಿಕೊಂಡರೂ ಪ್ರಯಾಣಿಕರು ಬಿಟ್ಟುಕೊಡಲು ಮುಂದಾಗಲಿಲ್ಲ. ಒಬ್ಬ ಯುವಕ ಎದ್ದು ನಿಂತು ಮಹಿಳೆಯನ್ನು ಕುಳಿತುಕೊಳ್ಳುವಂತೆ ಕರೆಯಲು ಮುಂದಾದಾಗ, ಪಕ್ಕದಲ್ಲಿದ್ದ ಮಹಿಳೆ ತಕ್ಷಣವೇ ಆತನ ಕೈಹಿಡಿದೆಳೆದು ಕೂರಿಸಿದರು. ಇದರಿಂದ ಮಗುವಿನ ಜೊತೆಗಿದ್ದ ಮಹಿಳೆ ಸೀಟು ಸಿಗದೆ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಾಯಿತು.
ಮಹಿಳೆಯರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ಶಾಸಕರು, ಸಂಸದರಿಗೆ, ಅಂಗವಿಕಲರಿಗೆ ಎಂದೆಲ್ಲ ಸೀಟುಗಳನ್ನು ಮೀಸಲಿರಿಸಲಾಗಿರುತ್ತದೆ. ಬೆಂಗಳೂರಿನ ಬಿಎಂಟಿಸಿ ಬಸ್ಸುಗಳಲ್ಲಿ ಈ ನಿಯಮ ಬಹುತೇಕ ಕಡ್ಡಾಯವಾಗಿ ಪಾಲನೆಯಾಗುತ್ತದೆ. ಸ್ವಲ್ಪ ವರ್ಷಗಳ ಹಿಂದೆ ವಯೋವೃದ್ಧರಿಗೆ, ಸ್ತ್ರೀಯರಿಗೆ, ಮಕ್ಕಳನ್ನು ಎತ್ತಿಕೊಂಡು ಬರುವವರಿಗೆ ಪ್ರಯಾಣಿಕರು ಸಹಜವಾಗಿಯೇ ಸೀಟು ಬಿಟ್ಟುಕೊಡುವ ಔದಾರ್ಯವಿತ್ತು. ಆದರೀಗ ಮಾನವೀಯತೆ, ಪರಸ್ಪರ ಸಹಕಾರ ಭಾವ ಕಡಿಮೆಯಾಗುತ್ತಿದ್ದು, ಮಗುವನ್ನು ಎತ್ತಿಕೊಂಡು ಬರುವ ಮಹಿಳಾ ಪ್ರಯಾಣಿಕರಿಗೂ ಆಸನವನ್ನು ಮೀಸಲಿರಿಸಬೇಕಾದ ಸಂದರ್ಭ ಬಂದಿರುವ ಕಾಲದಲ್ಲಿ ನಾವಿದ್ದೇವೆ. ಅದೂ ಆದರೆ ಒಳಿತು ಎನಿಸುತ್ತದೆ.
-ರುದ್ರಮೂರ್ತಿ ಎಂ.ಜೆ.,ಚಿತ್ರದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.