ದೇಶದಲ್ಲಿ ಹಿರಿಯ ನಾಗರಿಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದನ್ನು ತಿಳಿದು (ಪ್ರ.ವಾ., ಜ. 8) ಬೇಸರವಾಯಿತು. ನಾವು ಬರೀ ಸಾಕ್ಷರರಾಗಿದ್ದೇವೆಯೇ ಹೊರತು ಶಿಕ್ಷಿತರಾಗಿಲ್ಲ ಎನಿಸಿತು. ಸಂಸ್ಕಾರವಿಲ್ಲದ ಜೀವನ ಏತಕ್ಕಾಗಿ? ಗುರುಹಿರಿಯರನ್ನು ಗೌರವಿಸದ ಸ್ಥಿತಿಗೆ ನಮ್ಮ ಯುವಜನ ಬಂದಿದ್ದಾರೆಯೇ ಎಂಬ ಪ್ರಶ್ನೆ ಮೂಡಿತು.
ಗುರುವಿಲ್ಲದ್ದು ಮಠವಲ್ಲ, ಹಿರಿಯರಿಲ್ಲದ್ದು ಮನೆ ಅಲ್ಲ ಎಂಬ ಮಾತಿದೆ. ನಮ್ಮ ದೇಶದ ಸಂಸ್ಕೃತಿ ಬರೀ ಪುಸ್ತಕದಲ್ಲಿ ಇರುವುದಲ್ಲ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮನ್ನು ಸಾಕಿ ಸಲಹಿದ ಹಿರಿಯರಿಗೆ ಕೊನೆಗಾಲದಲ್ಲಿ ನೆಮ್ಮದಿಯ ಜೀವನ, ಊಟ, ಬಟ್ಟೆ ಕೊಡಲಾರದ ಸ್ಥಿತಿಗೆ ಬರುವುದು ವಿಷಾದನೀಯ ಸಂಗತಿ. ಮುಂದೆ ನಮ್ಮ ಗತಿಯೂ ಇದೇ ರೀತಿ ಆಗುತ್ತದೆ ಎನ್ನುವ ಪರಿಜ್ಞಾನ ಬೇಡವೇ? ಇಂತಹ ಸ್ಥಿತಿಯ ಬಗ್ಗೆ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
- ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.