ಆರ್ಥಿಕವಾಗಿ ಹಿಂದುಳಿದ ‘ಮೇಲ್ಜಾತಿ ಮೀಸಲಾತಿಗೆ ಮಾನದಂಡವಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕೃತಿ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ (ಪ್ರ.ವಾ., ಜೂನ್ 27). ನರೇಂದ್ರ ಮೋದಿ ಅವರು ಇಂಥವರಿಗೆ ಶೇ 10ರಷ್ಟು ಮೀಸಲಾತಿ ನೀಡಿದ್ದರೂ ಹಿಂದುಳಿದ ವರ್ಗದವರು ಮೌನವಾಗಿದ್ದಾರೆ ಎಂದೂ ಹೇಳಿದ್ದಾರೆ. ನಿಜ, ಸಮಾಜದ ಎಲ್ಲ ವರ್ಗಗಳಲ್ಲೂ ಬಡವರು, ಕಡುಬಡವರು ಇದ್ದಾರೆ. ಯಾರೂ ಇಂಥ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿ ಬರುವುದಿಲ್ಲ. ಪ್ರಭಾವಿ ಜಾತಿಗಳಲ್ಲೂ ಆರ್ಥಿಕವಾಗಿ ತುಂಬಾ ಹಿಂದುಳಿದವರು ಇದ್ದಾರೆ ಎಂಬುದು ಕಟು ಸತ್ಯ. ಆರ್ಥಿಕ ತೊಂದರೆ ಇರುವ ಕಾರಣಕ್ಕೆ ಅಂತಹ ಜಾತಿಗಳ ನೂರಾರು ವಿದ್ಯಾರ್ಥಿಗಳು ಓದು ಮುಂದುವರಿಸಲಾರದೆ ಕೈಚೆಲ್ಲಿ ಕುಳಿತವರಿದ್ದಾರೆ.
ಹಾಗೆ ನೋಡಿದರೆ ಮೀಸಲಾತಿಯ ಸೌಲಭ್ಯ ಪಡೆದು ಐಎಎಸ್, ಕೆಎಎಸ್ ಪಾಸಾಗಿ ಸರ್ಕಾರಿ ಉನ್ನತ ಉದ್ಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಿರುವ ಕುಟುಂಬ ವರ್ಗದವರ ವಿದ್ಯಾಭ್ಯಾಸಕ್ಕೆ ನಿಜವಾಗಿಯೂ ಮೀಸಲಾತಿ ಅಗತ್ಯವಿಲ್ಲ. ಆದರೂ ರೂಢಿಯಂತೆ ಅದು ಲಭ್ಯವಾಗುತ್ತಿದೆ. ಇದು ಅಸಮಾನತೆಯ ಸೂಚಕವಲ್ಲವೇ? ಜಾತಿಯೊಂದರಲ್ಲಿ ಮುಂದುವರಿದವರು ಎಂದ ಮಾತ್ರಕ್ಕೆ ಅವರನ್ನು ಸಾಮಾಜಿಕವಾಗಿ ತುಳಿಯುವುದು ಎಂಥ ಮಾನವೀಯತೆ?
-ಗಣಪತಿಶಿರಳಗಿ, ಸಾಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.