ರಾಜಕೀಯ ನಾಯಕರು ಇತ್ತೀಚಿಗೆ ಬಹಿರಂಗ ಸಭೆ– ಸಮಾರಂಭಗಳಲ್ಲಿ ಎದುರಾಳಿಗಳನ್ನು ಜೋಡೆತ್ತು, ಕುಂಟೆತ್ತು, ಮುದಿಯೆತ್ತು, ಎರಡು ಹಲ್ಲಿನ ಕರ, ಎಮ್ಮೆಗಳು, ಟಗರು ಎಂದೆಲ್ಲಾ ಜರಿಯುತ್ತಿರುವುದು ಸಾಮಾನ್ಯವಾಗಿದೆ. ದಶಕಗಳಿಂದ ರಾಜಕಾರಣ ಮಾಡುತ್ತಾ ಸಾರ್ವಜನಿಕ ಜೀವನದಲ್ಲಿರುವವರು ಕೂಡ ಎಗ್ಗಿಲ್ಲದೆ ಇಂತಹ ಭಾಷಾ ಪ್ರಯೋಗ ಮಾಡುವುದನ್ನು ಕಂಡು ವಿಷಾದವೆನಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಗೌರವ, ವ್ಯಕ್ತಿತ್ವ ಇರುತ್ತದೆ. ಅದನ್ನು ಗೌರವಿಸಬೇಕಾದುದು ಪ್ರತೀ ನಾಗರಿಕನ ಕರ್ತವ್ಯ. ತೋಚಿದ್ದನ್ನು, ಬಾಯಿಗೆ ಬಂದದ್ದನ್ನು ಸಾರ್ವಜನಿಕವಾಗಿ ಮಾತನಾಡಿ ಮನುಷ್ಯ ಹಗುರವಾಗಬಾರದು.
ಮುಗ್ಧ, ಅಮಾಯಕ ಮೂಕ ಪ್ರಾಣಿಗಳ ಹೆಸರು ಹೇಳಿ ಅವುಗಳನ್ನು ಅವಮಾನಿಸದಿರಿ. ಪರೋಪಕಾರಿಯಾಗಿ ಇಡೀ ಬದುಕು ಸಾಗಿಸಿ ಸಾರ್ಥಕತೆ ಕಂಡುಕೊಳ್ಳುವ ಪ್ರಾಣಿಗಳೆಲ್ಲಿ, ಮತಗಳಿಗಾಗಿ ಏನೆಲ್ಲ ಮುಖವಾಡಗಳನ್ನು ತೊಡುವ ನೀವೆಲ್ಲಿ? ಅಧಿಕಾರದ ಕುರ್ಚಿ ಹಿಡಿಯಬೇಕೆನ್ನುವ ಧಾವಂತದಲ್ಲಿ ಪದೇಪದೇ ಪ್ರಾಣಿಗಳ ಹೆಸರು ಹೇಳುವುದನ್ನು ನಿಲ್ಲಿಸಿ.
ಡಿ.ರಾಮಣ್ಣ ಅಲ್ಮರ್ಸಿಕೇರಿ, ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.