ADVERTISEMENT

ಜನಸಂಖ್ಯಾ ನಿಯಂತ್ರಣ: ಚರ್ಚಾರ್ಹ ಸಂಗತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST

‘ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಇಬ್ಬರು ಮಕ್ಕಳ ನೀತಿ ಜಾರಿಯ ಅಗತ್ಯ ಇದೆಯೇ?’ ಎಂಬ ವಿಷಯ ಕುರಿತ ಚರ್ಚೆಯಲ್ಲಿ (ಪ್ರ.ವಾ., ಜುಲೈ 3) ಇಬ್ಬರು ಲೇಖಕರು ತಮ್ಮ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚರ್ಚೆಯಾಗಬೇಕು. ಅಲ್ಲದೆ ಈ ರೀತಿಯ ನಿಯಂತ್ರಣಗಳಿಂದ ಚೀನಾವು ಆರ್ಥಿಕತೆಗೆ ಒಂದು ಯುವಸಮೂಹದ ಕೊಡುಗೆಯನ್ನು ಕಳೆದುಕೊಂಡು ಪರಿತಪಿಸುತ್ತಿರುವುದನ್ನು ನಾವು ಜ್ವಲಂತ ಉದಾಹರಣೆಯಾಗಿ ಕಾಣಬಹುದು. ಆದರೆ ವಿಚಾರ ಅದಲ್ಲ. ಭಾರತದಲ್ಲಿರುವ ನಾಗರಿಕರಿಗೆ ಸ್ಪಷ್ಟವಾದ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಸರಿಯಾಗಿ ಅವಲೋಕಿಸಬೇಕಾದ ಸಮಯ ಇದು.

ಬಹುಮುಖ್ಯವಾದ ವಿಚಾರವೆಂದರೆ, ಭಾರತದಲ್ಲಿ ಪ್ರತೀ 1000ಕ್ಕೆ ಶಿಶುಮರಣ ಪ್ರಮಾಣ, ತಾಯಿ ಮರಣ ಪ್ರಮಾಣ ಎಷ್ಟಿದೆ, ಹಸಿವಿನ ಸೂಚ್ಯಂಕ, ಬಡತನದ ಸೂಚ್ಯಂಕದಲ್ಲಿ ಜಾಗತಿಕವಾಗಿ ಭಾರತ ಎಷ್ಟನೇ ಸ್ಥಾನದಲ್ಲಿದೆ, ಶೈಕ್ಷಣಿಕ ಕ್ಷೇತ್ರ, ಲಿಂಗ ಸಮಾನತೆಯಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ಎಂಬಂತಹ ಅಂಶಗಳನ್ನು ನಾವು ಪರಿಗಣಿಸಿದಾಗ, ದೇಶವು ಇನ್ನೂ ಯಾವ ಹಂತದಲ್ಲಿದೆ, ನಾವು ಸಾಧಿಸಬೇಕಾದ ಸಂಗತಿಗಳೇನು ಎಂಬುದು ತಿಳಿಯುತ್ತದೆ. ಇದನ್ನು ಪರಿಗಣಿಸಿ, ಪ್ರಸ್ತುತ ನಾವು ಹೊಂದಿರುವ ಜನಸಮೂಹಕ್ಕೆ ನೀಡಬೇಕಾದಂತಹ ಸೌಕರ್ಯಗಳನ್ನು ಒದಗಿಸಿದರೆ, ಅದು ಸರ್ಕಾರದ ಬಹು ದೊಡ್ಡ ಸಾಧನೆ ಆಗಲಿದೆ.

–ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT