ಇದೇ 21ರಂದು ವಿಶ್ವ ತಾಯ್ನುಡಿ ದಿನ ಆಚರಿಸಿದ್ದೇವೆ. ತಾಯ್ನುಡಿ ಬಗೆಗಿನ ಪ್ರೇಮ ಎಲ್ಲೆಡೆ ಉಕ್ಕಿ ಹರಿಯಿತು! ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ತೊಂಬತ್ತರ ದಶಕದವರೆಗೂ ಬಹುತೇಕರ ಶಿಕ್ಷಣವು ಕನ್ನಡ ಮಾಧ್ಯಮದಲ್ಲಿಯೇ ನಡೆಯಿತು. ಹೀಗಾಗಿ ಅವರು ಒಂದಷ್ಟು ಸೌಲಭ್ಯಗಳಿಂದ ವಂಚಿತರೂ ಆಗಿದ್ದಾರೆ. ಇದು ಅವರ ಮುಂದಿನ ಪೀಳಿಗೆಯನ್ನು ಇಂಗ್ಲಿಷ್ ಮಾಧ್ಯಮದತ್ತ ದೂಡಲು ಪ್ರಬಲ ಕಾರಣವಾಗಿದೆ. ಇದರಿಂದ ಎಷ್ಟು ಅನುಕೂಲ ಆಗಿದೆ, ಆಗುತ್ತದೆ ಎಂಬುದು ಮುಂದಿನ ಮಾತು.
ನಮ್ಮ ಸೃಜನಶೀಲ ವಲಯವೂ ಕನ್ನಡ ನುಡಿಯ ಬಗ್ಗೆ ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದೆ. ಅವರ ಹಿಪೋಕ್ರಸಿಯೂ ಕನ್ನಡದ ಈ ದುಃಸ್ಥಿತಿಗೆ ಕಾರಣ ಅನ್ನಿಸುತ್ತದೆ. ಕನ್ನಡ ಎಂದರೆ ಕತೆ, ಕಾದಂಬರಿ, ಕವನ ಎನ್ನುವ ಸೀಮಿತ ದೃಷ್ಟಿಕೋನದಿಂದ ಹೊರಬರಬೇಕು. ಕನ್ನಡವನ್ನು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿ ಯಶಸ್ಸುಗೊಳಿಸಬೇಕು. ಭಾರತದಲ್ಲಿ ಇಂಗ್ಲಿಷ್ ಹಾಗೂ ಹಿಂದಿಗೆ ಇರುವ ಎಲ್ಲಾ ಅನುಕೂಲಗಳು, ಅವಕಾಶಗಳು ಕನ್ನಡಕ್ಕೆ ಇರಬೇಕು. ಹಾಗೆ ಇಲ್ಲದಿರುವುದೇ ಹಿಂದಿಯೇತರ ಎಲ್ಲಾ ಭಾರತೀಯ ಭಾಷೆಗಳ ಸಮಸ್ಯೆಯೂ ಹೌದು. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಬರೀ ತಾಯ್ನುಡಿ ಶಿಕ್ಷಣದ ಬಗ್ಗೆ ಮಾತ್ರ ನಮ್ಮ ಗಮನ ಕೇಂದ್ರೀಕರಿಸಿದರೆ, ಒಳಗೆ ಕ್ಯಾನ್ಸರ್ ಗಡ್ಡೆಯನ್ನು ಬಿಟ್ಟು ಹೊರಗೆ ಮುಲಾಮು ಹಚ್ಚಿದಂತಾಗುತ್ತದೆ ಅಷ್ಟೇ!
-ಗಿರೀಶ್ ಮತ್ತೇರ,ಹನುಮಂತದೇವರ ಕಣಿವೆ, ಹೊಳಲ್ಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.