ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಚಾರ ಭರದಿಂದ ಸಾಗಿದೆ. ಅನೇಕರು ಹಣ-ಮದ್ಯ, ತೋಳ್ಬಲ ಪ್ರಯೋಗಿಸಿ ಮತವನ್ನು ಪಡೆಯಲು ಹವಣಿಸುತ್ತಿದ್ದಾರೆ. ಇನ್ನು ಹಲವರು ತಮ್ಮ ಗ್ರಾಮದ ಹಾಳು ಬಿದ್ದ ಗುಡಿ ಗುಂಡಾರಗಳ ಜೀರ್ಣೋದ್ಧಾರ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಆದರೆ ಯಾರು ಕೂಡ ಗ್ರಾಮದ ಅಭಿವೃದ್ಧಿ ಬಗ್ಗೆ ಮಾತನಾಡಲು ಸಿದ್ಧರಿಲ್ಲ. ಜಾತಿ ಲೆಕ್ಕಾಚಾರವೂ ಜೋರಾಗಿ ನಡೆದಿದೆ. ಇನ್ನು ಕೆಲವರು ಭರ್ಜರಿಯಾದ ಊಟ, ಅದರಲ್ಲೂ ಮದ್ಯಪಾನ, ಮಾಂಸದಡಿಗೆಯ ರುಚಿ ತೋರಿಸಿ ಮತ ಕೇಳಿದ್ದಾರೆ. ಇನ್ನು ಕೆಲವರು ಊರಿನ ಹಿರಿಯರು ಕಿರಿಯರು ಎನ್ನದೆ ಕಂಡವರ ಕಾಲು ಹಿಡಿದು ಮತಯಾಚನೆ ಮಾಡುತ್ತಿದ್ದಾರೆ.
ಕುಡಿಯುವ ನೀರು, ಗ್ರಾಮಕ್ಕೆ ಸೂಕ್ತ ಸಾರ್ವಜನಿಕ ಸಾರಿಗೆ ಸೌಲಭ್ಯ, ಶಾಲೆಯ ದುಃಸ್ಥಿತಿ ಸರಿಪಡಿಸುವುದು, ಗ್ರಾಮದ ಸ್ವಚ್ಛತೆಯಂತಹ ಸಂಗತಿಗಳ ಬಗ್ಗೆ ಮಾತನಾಡಲು ಯಾರೂ ಸಿದ್ಧರಿಲ್ಲ. ಗ್ರಾಮೀಣ ಉದ್ಯೋಗ ಭರವಸೆಯ ಕಾಮಧೇನು ಎನಿಸಿರುವ ನರೇಗಾ ಯೋಜನೆ ಜಾರಿಗೊಳಿಸಲು ದೃಢ ಸಂಕಲ್ಪ ಮಾಡಿರುವ ಬಗ್ಗೆ ಆಶ್ವಾಸನೆ ಕೊಡಲು ಸಹ ತಯಾರಿಲ್ಲ. ಬಯಲು ಶೌಚಾಲಯಮುಕ್ತ ಗ್ರಾಮವನ್ನಾಗಿ ಮಾಡುವ ಬಗ್ಗೆ ಕಳಕಳಿ ಇದ್ದಂತೆ ತೋರುವುದಿಲ್ಲ.
ಕರ್ನಾಟಕದಲ್ಲಿ ಗ್ರಾಮಾಭಿವೃದ್ಧಿಯ ಕನಸು ಕಾಣುವ ಗ್ರಾಮೀಣ ಯುವಕರ ಸಂಖ್ಯೆ ದೊಡ್ಡದಾಗೇನೂಇದ್ದಂತಿಲ್ಲ. ಆದರೂ ಕಣ್ಣುಗಳಲ್ಲಿ ಗ್ರಾಮಾಭಿವೃದ್ಧಿಯ ಕನಸನ್ನು ಹೊತ್ತ ಕೆಲವು ಸುಶಿಕ್ಷಿತ ಮತ್ತು ಪದವೀಧರಯುವಕ-ಯುವತಿಯರು ಸ್ಪರ್ಧಿಸಿರುವುದು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯ ಆಶಾದಾಯಕ ವಿಷಯವಾಗಿದೆ. ಗ್ರಾಮ ಭಾರತವು ಇಂಥವರ ಆಲೋಚನೆಗಳು, ಕನಸುಗಳ ಮೇಲೆ ತನ್ನ ಭವಿಷ್ಯವನ್ನು ಅವಲಂಬಿಸಿದೆ.
-ಡಿ.ಎಂ.ನದಾಫ್,ಅಫಜಲಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.