ಬಿಹಾರಕ್ಕೆ ರಾಷ್ಟ್ರಪತಿ ಆಡಳಿತ
ನವದೆಹಲಿ, ಜೂ. 29– ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ರವರು ಇಂದು ಬಿಹಾರ ವಿಧಾನಸಭೆಯನ್ನು ವಿಸರ್ಜಿಸಿ, ಬಿಹಾರದ ಆಡಳಿತವನ್ನು ತಾವೇ ವಹಿಸಿಕೊಂಡರು.
ಚೀನದಲ್ಲಿ ರೆಡ್ಗಾರ್ಡ್ ಗುಂಪುಗಳ ಘರ್ಷಣೆ
ಟೈಪೆ, ಜೂ. 29– ಮೇ 17 ರಂದು ನೈರುತ್ಯ ಚೀನದ ಯುನ್ ಅನಿ ಪಟ್ಟಣದಲ್ಲಿ ಎರಡು ರೆಡ್ಗಾರ್ಡ್ ಗುಂಪುಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿತೆಂದು ಟೈವಾನ್ ಗುಪ್ತ ಪೊಲೀಸ್ ವಲಯಗಳು ಇಂದು ವರದಿ ಮಾಡಿವೆ. ಈ ಘರ್ಷಣೆಯಲ್ಲಿ ಅನೇಕ ಮಂದಿ ರೆಡ್ಗಾರ್ಡ್ಗಳು ಕೊಲ್ಲಲ್ಪಟ್ಟರೆಂದು ವರದಿ ತಿಳಿಸಿದೆ.
ಕಾಶ್ಮೀರ ಭಾರತಕ್ಕೆ ಸೇರಿದ ಭಾಗ: ಅರ್ಷದ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯೆ
ನವದೆಹಲಿ, ಜೂ. 29– 1947ರಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿತೆಂಬುದನ್ನು ಭಾರತ ಸ್ಪಷ್ಟಪಡಿಸುತ್ತದೆ ಎಂದು ವಿದೇಶಾಂಗ ಸಚಿವ ಶಾಖೆ ವಕ್ತಾರರು ಇಂದು ತಿಳಿಸಿದರು.
ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿಯಲ್ಲಿ ವಿದೇಶಾಂಗ ಸಚಿವ ಅರ್ಷದ್ ಹುಸೇನ್ ನಿನ್ನೆ ಕೊಟ್ಟ ಹೇಳಿಕೆಗೆ ವಕ್ತಾರರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು.
ಚಿನ್ನ ನಿಯಂತ್ರಣ ಶಾಸನಕ್ಕೆ ಜೀವದಾನ: ಸುಗ್ರೀವಾಜ್ಞೆ
ನವದೆಹಲಿ, ಜೂ. 29– ಚಿನ್ನದ ಹತೋಟಿಗೆ ಸಂಬಂಧಿಸಿದ ಕಾನೂನನ್ನು ಮುಂದುವರೆಸಲು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ಇಂದು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದರು.
ಬಂಗಾರದ ಗಣಿ – ಕಪ್ಪತಗುಡ್ಡ
ಬೆಂಗಳೂರು, ಜೂ. 29– ಬಂಗಾರದ ಉತ್ಪಾದನೆಗೆ ಹೆಸರಾದ ಮೈಸೂರು ರಾಜ್ಯದ ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳ ಸಾಲಿಗೆ ಧಾರವಾಡ ಜಿಲ್ಲೆಯ ಕಪ್ಪತಗುಡ್ಡವೂ ಸೇರುವ ಸೂಚನೆ ಕಂಡು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.