ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಸಂಚಾರ ಪೊಲೀಸರ ವರ್ತನೆಯು (ಪ್ರ.ವಾ., ಆ. 6) ಬದಲಾಗಬೇಕು ಎಂದು ಅಪೇಕ್ಷಿಸುವುದು ಬರೀ ಕನಸೇನೋ ಎನ್ನಿಸುತ್ತದೆ. ಸಂಚಾರ ಪೊಲೀಸರ ದಂಡ ವಸೂಲಿ ಕ್ರಮ ಇಂದು ನಿನ್ನೆಯದಲ್ಲ. ದಿನದಿಂದ ದಿನಕ್ಕೆ ಇದು ಹೆಚ್ಚುತ್ತಿದೆಯೇ ಹೊರತು ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ಮಾರ್ಗದರ್ಶಕರಾಗಬೇಕೇ ವಿನಾ ಸಿಕ್ಕ ಸಿಕ್ಕಲ್ಲಿ ವಾಹನ ಅಡ್ಡಗಟ್ಟುವುದರಿಂದ ಸುರಕ್ಷತೆ ನಿಯಮಕ್ಕೆ ಅಡ್ಡಿಯಾಗುತ್ತದೆ.
ಇದಲ್ಲದೆ, ಇಂಥ ಠಾಣೆಯಿಂದ ಇಂತಿಷ್ಟು ದಂಡದ ಮೊತ್ತ ಸಂಗ್ರಹವಾಗಬೇಕು ಎಂಬ ‘ಟಾರ್ಗೆಟ್’ ಇಟ್ಟುಕೊಂಡು ಕರ್ತವ್ಯ ನಿರ್ವಹಿಸುವುದು ಮತ್ತು ಹೆಚ್ಚು ದಂಡ ಸಂಗ್ರಹವೇ ಸಾಧನೆ ಎಂಬ ಮನೋಭಾವ ತಾಳುವುದು ಜನಪರ ಕ್ರಮಗಳಲ್ಲ. ಸಂಚಾರ ನಿಯಮಗಳನ್ನು ಪಾಲಿಸಲು ವಾಹನ ಸವಾರರು ಎಷ್ಟು ಜವಾಬ್ದಾರರಾಗಿರುತ್ತಾರೋ ಅಷ್ಟೇ ಮುಖ್ಯವಾಗಿ ಮೂಲ ಸೌಕರ್ಯ ಒದಗಿಸುವ ಹೊಣೆಯನ್ನು ಸರ್ಕಾರ ಹೊತ್ತುಕೊಳ್ಳಬೇಕು.
⇒ಡಾ. ಜಿ.ಬೈರೇಗೌಡ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.