ADVERTISEMENT

ಹೆಮ್ಮರವಾಗುತ್ತಿದೆ ಅಸ್ಪೃಶ್ಯತಾ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:16 IST
Last Updated 28 ಸೆಪ್ಟೆಂಬರ್ 2021, 17:16 IST

‘ಪ್ರೀತಿಯ ಅಪ್ಪುಗೆಗೆ ಕಾಯ್ದೆ ಬೇಡವೇ?’ ಎಂಬ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಸೆ. 27) ದೇಶದಲ್ಲಿ ಶ್ರೇಣೀಕೃತ ಸಮಾಜವು ನಿರಂತರವಾಗಿ ಅಸ್ಪೃಶ್ಯತೆ ಆಚರಣೆ ಮಾಡುತ್ತಾ ಬರುತ್ತಿರುವುದನ್ನು ಆಧಾರಗಳ
ಸಮೇತ ತಿಳಿಸಿದೆ.

ರಾಮನಗರ ಜಿಲ್ಲೆಯ ಅಮ್ಮನಪುರ ಗ್ರಾಮದಲ್ಲಿ ಇತ್ತೀಚೆಗೆ ನೆರವಿ ಸಮಾರಂಭವೊಂದನ್ನು ಆಯೋಜಿಸ
ಲಾಗಿತ್ತು. ಹೊರಗಿನ ಅಡುಗೆಯವರಿದ್ದರೂ ಸವರ್ಣೀಯರು ಕೆಲವರು ಮಾಂಸವನ್ನು ಪ್ರತ್ಯೇಕವಾಗಿ ಪಡೆದು ಅಡುಗೆ ಮಾಡಿ ಉಂಡರು. ಬಂಜಾರರು ಮಾಡಿದ್ದನ್ನು ಸಹ ತಿನ್ನುವುದಿಲ್ಲ ಎಂದರೆ, ಇನ್ನು ಚಲವಾದಿ, ಮಾದಿಗದಂತಹ ತಳ ಸಮುದಾಯಗಳ ಕಥೆ ಊಹಿಸಬಹುದು. ಮಾಂಸಕ್ಕೆ ಇಲ್ಲದ ಮೈಲಿಗೆ ಜಾತಿಗಳಿಗೆ ಇದೆ.

ಮಡಿ-ಮೈಲಿಗೆ ಹಳ್ಳಿಗಳಲ್ಲಿ ಹೆಚ್ಚಾಗುತ್ತಿದೆ. ನಗರಗಳಲ್ಲಿರುವ ದಲಿತರ ಮನೆಗಳಲ್ಲಿ ಚಪ್ಪರಿಸಿಕೊಂಡು ಊಟ ಮಾಡುವ ಸವರ್ಣೀಯರು ಹಳ್ಳಿಗಳಲ್ಲಿ ಮಾತ್ರ ಪ್ರತಿಷ್ಠೆಯ, ಶ್ರೇಷ್ಠತೆಯ ಪ್ರತೀಕವಾಗಿ ಅಸ್ಪೃಶ್ಯತೆ ಯನ್ನು ಉಳಿಸಿ ಬೆಳೆಸುತ್ತಿರುವುದು ಅಪಾಯಕಾರಿ ನಡೆ. ಇದು ‘ರಕ್ತ ಸುರಿಯದ ಮಾನಸಿಕ ಯುದ್ಧ’ವಾಗಿದೆ. ಈ ಪಿಡುಗನ್ನು ನಿವಾರಿಸುವ ಎಷ್ಟೋ ಪ್ರಯತ್ನಗಳಾಗಿವೆ. ಆದರೂ ಅಸ್ಪೃಶ್ಯತಾ ಆಚರಣೆ ಮರುಜೀವ ಪಡೆದು ಹೆಮ್ಮರವಾಗುತ್ತಿದೆ. ಇದನ್ನು ತಡೆಯಲು, ಅಸ್ಪೃಶ್ಯತೆ ಆಚರಣೆಯಲ್ಲಿರುವ ಊರಿನಲ್ಲಿ ರಾಜಕೀಯ ಪ್ರತಿನಿಧಿಗಳು ಚುನಾವಣೆಗೆ ನಿಲ್ಲುವ ಹಕ್ಕನ್ನು ಕಸಿಯುವ ಕಾನೂನು ಬರಬೇಕು. ತಮಿಳುನಾಡಿನಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಹಳ್ಳಿಗೆ ₹ 10 ಲಕ್ಷ ಬಹುಮಾನ ಪ್ರಕಟಿಸಲಾಗಿದೆ. ಇದು ಒಂದು ಉತ್ತಮ ನಡೆ. ಎಳೆ ಮಕ್ಕಳನ್ನೂ ಬಿಡದೆ ಅಸ್ಪೃಶ್ಯತಾ ಆಚರಣೆ ನಡೆಯುತ್ತಿದೆ. ಸಮಾನ ಶಿಕ್ಷಣ, ಆಹಾರ ಹಕ್ಕು, ವಸತಿ, ಉಚಿತ ಆರೋಗ್ಯ ಸೇವಾ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದರೆ ಇಂತಹ ತಾರತಮ್ಯ ಸ್ವಲ್ಪಮಟ್ಟಿಗೆ ನಿವಾರಣೆ ಆಗಬಹುದು.

ADVERTISEMENT

– ಡಾ. ಎ.ಆರ್.ಗೋವಿಂದ ಸ್ವಾಮಿ ನಾಯಕ್,ಅಮ್ಮನಪುರ‌, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.