ADVERTISEMENT

ಕಾಡಲ್ಲಷ್ಟೇ ವನ್ಯಜೀವಿಗಳ ಬೇಟೆಯಾಗದು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 16:45 IST
Last Updated 3 ಅಕ್ಟೋಬರ್ 2021, 16:45 IST

ಕರ್ನಾಟಕದಲ್ಲಿ ಅರಣ್ಯದ ಪ್ರಮಾಣ ಶೇ 20ರಷ್ಟಿದ್ದು ಇದನ್ನು ಶೇ 30ಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗು
ವುದು ಎಂದು ಅರಣ್ಯ ಸಚಿವರು ಹೇಳಿರುವುದು (ಪ್ರ.ವಾ., ಅ. 3) ಸ್ವಾಗತಾರ್ಹ. ಈ ದಿಸೆಯಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ರಾಜ್ಯದ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ‘ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಪಡೆ’ ರಚನೆಯಾಗಬೇಕು.‌ ಏಕೆಂದರೆ ಕಾಡು ಇರುವಲ್ಲಿ ಮಾತ್ರ ವನ್ಯಜೀವಿಗಳ ಬೇಟೆಯಾಗುತ್ತದೆ ಎಂಬುದು ತಪ್ಪುಗ್ರಹಿಕೆ. ಮಾನವನ ಹಸ್ತಕ್ಷೇಪದಿಂದ ತೀವ್ರವಾಗಿ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ಅನೇಕ ಜೀವಿಗಳಿಗೆ ವಿವಿಧ ಪ್ರದೇಶಗಳಲ್ಲಿ ಬದುಕುವುದು ಅನಿವಾರ್ಯವಾಗಿದೆ. ಉದಾಹರಣೆಗೆ, ಪಶ್ಚಿಮಘಟ್ಟಗಳಲ್ಲಿ ಬದುಕುವ ಪುನುಗು ಬೆಕ್ಕು ಬಯಲುಸೀಮೆಯಾದ ವಿಜಯನಗರದಲ್ಲಿ ಬದುಕು ಕಟ್ಟಿಕೊಂಡಿದೆ. ಅಂತೆಯೇ ಮಲೆನಾಡಿನ ಹಸಿರು ಪಾರಿವಾಳಗಳು ಬಯಲುಸೀಮೆಗೆ ತಾತ್ಕಾಲಿಕ ವಲಸೆ ಬರುತ್ತಿವೆ.

ವನ್ಯಜೀವಿಗಳ ಬೇಟೆ ತಡೆಯಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ತಂತ್ರಜ್ಞಾನದ ಕೊರತೆ ಇದೆ. ಇನ್ನು ಸ್ಥಳೀಯರು ವನ್ಯಜೀವಿಗಳ ಬೇಟೆಯನ್ನು ತಡೆಯಲು ಪ್ರಯತ್ನಿಸಿದರೆ ಅವರ ಮೇಲೆಯೇ ಹಲ್ಲೆ ಅಥವಾ ಒತ್ತಡ ಎದುರಾಗುತ್ತದೆ. ಆದ್ದರಿಂದ ಹೊಸ ಕಾರ್ಯಪಡೆಯು ಪಿಡಿಒ, ಶಾಲಾ ಮಕ್ಕಳು, ಶಿಕ್ಷಕರು, ಸ್ಥಳೀಯವಾಸಿಗಳು, ಪರಿಸರಾಸಕ್ತರನ್ನು ಹೊಂದಿರಬೇಕು. ಇವರಿಗೆ ಅರಣ್ಯಾಧಿಕಾರಿಗಳ ನೇರ ಸಂಪರ್ಕ ಸಾಧ್ಯವಾದರೆ ಸಾಧ್ಯವಾದಷ್ಟು ಮಟ್ಟಿಗೆ ವನ್ಯಜೀವಿಗಳ ಬೇಟೆಯನ್ನು ತಡೆಯಬಹುದು.

0ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.