ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿ, ‘ಇದು ನನ್ನ ಕೊನೆಯ ಚುನಾವಣಾ ಪ್ರಚಾರ, ಮುಂದೆ ಬರುತ್ತೇನೋ ಇಲ್ಲವೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಜತೆಗೆ, ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಹಿಂದೆ ತಮ್ಮ ಸೋಲಿಗೆ ಕಾರಣರಾದವರಿಗೆ ತಕ್ಕಪಾಠ ಕಲಿಸುವ ಮೂಲಕ ತಮಗಾದ ನೋವನ್ನು ಸರಿಪಡಿಸಬೇಕೆಂದು ಮಧುಗಿರಿಯಲ್ಲಿ ಇತ್ತೀಚೆಗೆ ತಮ್ಮ ಪಕ್ಷದ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆ ‘ಜನತಾ ಸಂಗಮ’ ಸಮಾವೇಶದಲ್ಲಿ ಹೇಳಿದ್ದಾರೆ. ಈ ಮೂಲಕ ತಮ್ಮ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ಹಾದಿ ತುಳಿದಿರುವುದು ಸರಿಯಲ್ಲ.
ಒಳ್ಳೆಯ ಕೆಲಸ ಮಾಡಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಣಾಳಿಕೆಯನ್ನು ಮುಂದಿಟ್ಟು ಮತದಾರರ ಮನ ಗೆಲ್ಲಬೇಕೇ ಹೊರತು ಸೇಡು ತೀರಿಸಿಕೊಳ್ಳುವ ಮಾತುಗಳನ್ನಾಡುವುದು ಹಾಗೂ ಪ್ರತೀ ಚುನಾವಣೆಯಲ್ಲಿ ‘ಇದೇ ನನ್ನ ಕೊನೇ ಚುನಾವಣೆ’ ಎಂದು ಕಣ್ಣೀರು ಸುರಿಸಿ ಮತದಾರರ ಅನುಕಂಪ ಗಳಿಸುವ ಮಾತುಗಳನ್ನಾಡುವುದು ದೇವೇಗೌಡರಂಥ ಹಿರಿಯ ರಾಜಕಾರಣಿಗೆ ಶೋಭೆ ತರುವುದಿಲ್ಲ.
–ಜಿ.ನಾಗೇಂದ್ರ ಕಾವೂರು, ಸಂಡೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.