ADVERTISEMENT

ಎಚ್ಚರ ವಹಿಸಿ, ಸವಾಲು ಎದುರಿಸಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 19:30 IST
Last Updated 26 ಮಾರ್ಚ್ 2020, 19:30 IST

21 ದಿನ ದೇಶವನ್ನು ‘ಬಂದ್‌’ ಮಾಡಿರುವುದು ಸರಿಯಾದ ನಿರ್ಧಾರ. ಆದರೆ ಅದನ್ನು ಅನುಷ್ಠಾನ ಮಾಡುವ ಸವಾಲನ್ನು ಅತ್ಯಂತ ಕಾಳಜಿಯಿಂದ ಎದುರಿಸಬೇಕಾಗುತ್ತದೆ. ವ್ಯವಸಾಯದ ಚಟುವಟಿಕೆ ನಡೆಯದಿದ್ದರೆ ಮುಂದಿನ ಸಾಲಿನ ಬೆಳೆಯೇ ನಾಶವಾಗುತ್ತದೆ. ಉದ್ಯೋಗ ಖಾತರಿ ಯೋಜನೆಯಡಿ ಮುಂಗಡ ಹಣ ಕೊಡುವುದು, ಕಟ್ಟಡ ಕಾರ್ಮಿಕರಿಗೆ ಒಂದಷ್ಟು ಹಣಸಹಾಯ ಮಾಡುವುದು ಸರಿ ಯಾದ ಕ್ರಮ. ಆದರೆ ನೋಂದಣಿ ಮಾಡಿಕೊಳ್ಳದ ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆಯೂ ಗಮನಹರಿಸಬೇಕಾಗಿದೆ.

ಕೊಳೆಗೇರಿಯಲ್ಲಿ ಜನದಟ್ಟಣೆ ಕಡಿಮೆ ಮಾಡಲು ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಇತರೆಡೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಬೇಕು. ಎಲ್ಲರೂ ಮನೆಯಲ್ಲಿ ಇದ್ದರೆ ವಿದ್ಯುತ್ ಬಳಕೆ ಜಾಸ್ತಿ ಆಗುತ್ತದೆ. ಕಾರ್ಖಾನೆಗಳ ಚಟುವಟಿಕೆ ನಿಂತಿರುವ ಕಾರಣ, ಆ ವಿದ್ಯುತ್ ಅನ್ನು ಮನೆ ಬಳಕೆಗೆ ಕೊಟ್ಟು, ವಿದ್ಯುತ್‌ ಕಡಿತ ಆಗದಂತೆ ನೋಡಿಕೊಳ್ಳಬೇಕು. ನಿರ್ಗತಿಕರಿಗೆ ಬಸ್ಸು ಅಥವಾ ರೈಲು ನಿಲ್ದಾಣಗಳ ಪ್ರಯಾಣಿಕರ ವಿಶ್ರಾಂತಿ ಕೋಣೆಗಳಲ್ಲಿ ಜಾಗ ಕೊಟ್ಟು, ಊಟದ ವ್ಯವಸ್ಥೆ ಮಾಡಬೇಕು. ಇಂಟರ್ನೆಟ್ ಉಚಿತವಾಗಿ ಕೊಡುವುದು,ಉಚಿತ ಇ- ಪುಸ್ತಕಗಳನ್ನು ಬಿಡುಗಡೆ ಮಾಡುವುದರಿಂದ, ಮನೆಯಲ್ಲಿ ಕಾಲ ಕಳೆಯು ವವರಿಗೆ ಅನುಕೂಲವಾಗುತ್ತದೆ. ಮನೆಯಲ್ಲೇ ಚಟುವಟಿಕೆ ಯಿಂದ ಹೇಗೆ ಇರಬಹುದು ಎನ್ನುವುದರ ಬಗ್ಗೆ ಜಾಗೃತಿ ಬೇಕು. ಇದಕ್ಕೆ ಪೂರಕವಾಗಿ, ಕರಕುಶಲ, ಚಿತ್ರ, ಕಥೆ, ಕವನ ಇತ್ಯಾದಿ ಬಹುಮಾನಸಹಿತ ಸ್ಪರ್ಧಾ ಚಟುವಟಿಕೆಗಳನ್ನು ಘೋಷಿಸಬೇಕು.

ಕೃಷಿಕ ಎ.ವಿ., ಶೃಂಗೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.