ವಾಲ್ಮೀಕಿ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತೆ ಅರುಣ್ ಜೋಳದಕೂಡ್ಲಿಗಿ ಅವರು ಬರೆದಿದ್ದಾರೆ (ಸಂಗತ, ಅ. 18). ರಾಮಾಯಣದ ಕವಿಯ ವಿಚಾರ ಬಂದಾಗಲೆಲ್ಲ ಒಂದು ಸಂಗತಿಯ ಪ್ರಸ್ತಾಪ ಬಂದೇ ಬರುತ್ತದೆ. ಅದೆಂದರೆ ದರೋಡೆಕೋರನಾಗಿದ್ದವನು ವರ್ಷಗಟ್ಟಲೆ ಸುದೀರ್ಘ ತಪಸ್ಸನ್ನು ಆಚರಿಸಿ ಕೂತಲ್ಲಿಯೇ ತನ್ನ ದೇಹದ ಸುತ್ತ ಬೆಳೆದಿದ್ದ ಹುತ್ತವನ್ನು ಒಡೆದು ಹೊರಬಂದನಾದ ಕಾರಣ ವಾಲ್ಮೀಕಿ ಎಂದು ಹೆಸರಾದ ಎಂಬುದು. ಅವನು ದರೋಡೆ ಕೋರನಾಗಿದ್ದನೋ ಇಲ್ಲವೋ ಅದು ಬೇರೆ ವಿಷಯ. ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ಎಂಬ ಅರ್ಥವಿರುವುದು ಪ್ರಸಿದ್ಧವಾದ್ದು. ಆದರೆ ಜೀವಂತ ವ್ಯಕ್ತಿಯ ಮೈಮೇಲೆ ಹಾಗೆ ಹುತ್ತ ಬೆಳೆಯಲಾರದು. ‘ವಾಲ್ಮೀಕಿ’ ಎಂದು ಹೆಸರು ಬರಲು ಬೇರೇನೋ ಕಾರಣವಿರಬಹುದು. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪುರೇಖೆ’ ಎಂಬ ಕವಿ ಅಡಿಗರ ಕವನದ ಸಾಲು ಒಂದು ಅದ್ಭುತವಾದ ರೂಪಕವಾಗಿ, ಕವಿಯ ಮನಸ್ಸು ಹುತ್ತ ಗಟ್ಟಿದಾಗಲೇ ಒಂದು ಮಹಾ ಕಾವ್ಯ ಸೃಷ್ಟಿಯಾಗಲು ಸಾಧ್ಯ ಎಂಬುದರ ಸೂಚಕವಾಗಿ ಇದ್ದರೂ ಅದು ವಸ್ತುಸಂಗತಿಯ ಅಭಿವ್ಯಕ್ತಿ ಅಲ್ಲ.
ಇನ್ನೊಂದು ದಿಕ್ಕಿನಿಂದ ನೋಡಿದಾಗ, ವೇದವ್ಯಾಸರಿಗೆ ‘ಕೃಷ್ಣದ್ವೈಪಾಯನ’ ಎಂಬ ಹೆಸರುಂಟಷ್ಟೆ. ವಾಸ್ತವವಾದ ಮೂಲ ಹೆಸರು ಕೃಷ್ಣ. ಇನ್ನೊಬ್ಬ ಖ್ಯಾತ ದ್ವಾರಕೆಯ ಕೃಷ್ಣನಿದ್ದ. ವಸುದೇವನ ಮಗನಾದ್ದರಿಂದ ಅವನಿಗೆ ವಾಸುದೇವ ಕೃಷ್ಣನೆಂಬ ಹೆಸರುಂಟು. ಅವನಿಂದ ಇವರು ಬೇರೆ ಎಂದು ಹೇಳಲು ದ್ವೀಪ ಪ್ರದೇಶದಿಂದ ಬಂದವನು ಎಂಬ ಅರ್ಥದ ‘ದ್ವೈಪಾಯನ ಕೃಷ್ಣ’ ಅಥವಾ ‘ಕೃಷ್ಣ ದ್ವೈಪಾಯನ’ ರೂಢಿಗೆ ಬಂದಿತು. ಮೂಲದಲ್ಲಿ ಒಂದೇ ಆಗಿದ್ದ ವೇದವನ್ನು ನಾಲ್ಕು ವೇದಗಳಾಗಿ ವಿಂಗಡಿಸಿದವನು ಎಂಬ ಅರ್ಥದಲ್ಲಿ ವೇದವ್ಯಾಸ ಎಂಬ ಹೆಸರು ರೂಢಿಗೆ ಬಂದದ್ದು ಆನಂತರದಲ್ಲಿ. ಹಾಗೆಯೇ ವಲ್ಮೀಕಗಳು ವಿಪುಲವಾಗಿ ಇರುವ ಪ್ರದೇಶದಿಂದ ಬಂದವನೆಂಬ ಕಾರಣಕ್ಕಾಗಿ ರಾಮಾಯಣದ ಕವಿಗೆ ‘ವಾಲ್ಮೀಕಿ’ ಎಂದೇಕೆ ಬಂದಿರಬಾರದು? ಇದು ಒಂದು ಸಂಭಾವ್ಯ ಊಹೆ. ವಿದ್ವಾಂಸರು ಈ ದಿಕ್ಕಿನಲ್ಲಿ ಆಲೋಚಿಸಬಹುದೇನೋ.
ಡಾ. ಆರ್.ಲಕ್ಷ್ಮೀನಾರಾಯಣ,ಬೆಂಗಳೂರು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.